ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ಅಭಿವೃದ್ಧಿ ಶೂನ್ಯವಾಗಿದೆ. ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ನರೇಗಲ್ಲ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಇಲ್ಲಿಗೆ ಬಂದ ಅಧಿಕಾರಿಗಳಾರೂ ಪಟ್ಟಣದ ಅಭಿವೃದ್ಧಿಯ ಕಡೆಗೆ ಯಾವುದೇ ಗಮನ ಹರಿಸದಿರುವುದು ಮತ್ತು ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೆ ಇದಕ್ಕೆಲ್ಲ ಕಾರಣವಾಗಿದ್ದು, ಇನ್ನು ಮುಂದಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟ್ಟಣದ ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕೆಂದು ನರೇಗಲ್ ಪಟ್ಟಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವನಗೌಡ ಪಾಟೀಲ ಹೇಳಿದರು.
ನರೇಗಲ್ಲ ಅಭಿವೃದ್ಧಿಯ ಕುರಿತು ಸಮಿತಿಯು ಸಿದ್ಧಪಡಿಸಿದ ಅನೇಕ ವಿಷಯಗಳ ಮನವಿಯನ್ನು ಮುಖ್ಯಾಧಿಕಾರಿಯವರಿಗೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ನಾವು ತುಂಬುವ ತೆರಿಗೆಯಿಂದ ಅನುಕೂಲವಾಗಿ ಪಟ್ಟಣದಲ್ಲಿ ಅಭಿವೃದ್ಧಿಯ ಕೆಲಸಗಳಾಗಬೇಕು. ಆದರೆ ಪಟ್ಟಣ ಪಂಚಾಯಿತಿಗೆ ಬರುವ ಅನುದಾನ ಸದ್ಬಳಕೆಯಾಗುತ್ತಿಲ್ಲ. ಸಮಿತಿಯ ವತಿಯಿಂದ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಒಂದು ಉಪ ಸಮಿತಿಯನ್ನು ನೇಮಕ ಮಾಡಲಾಗಿದ್ದು, ಅವರು ಒಪ್ಪಿಗೆ ನೀಡಿದ ನಂತರವೇ ಸಂಬಂಧಿಸಿದವರ ಬಿಲ್ಲುಗಳನ್ನು ಪಾಸ್ ಮಾಡಬೇಕೆಂದು ಶಿವನಗೌಡ ಪಾಟೀಲ ಹೇಳಿದರು.
ಸಲಹಾ ಸಮಿತಿಯ ಸದಸ್ಯ ಜಗದೀಶ ಸಂಕನಗೌಡ್ರ ಮಾತನಾಡಿ, ಇನ್ನು ಮುಂದಾದರೂ ಮುಖ್ಯಾಧಿಕಾರಿಯನ್ನೊಳಗೊಂಡು ಎಲ್ಲರೂ ಸಮರ್ಪಕ ಕೆಲಸ ಮಾಡಿದರೆ ಪಟ್ಟಣದ ಅಭಿವೃದ್ಧಿಯಾದೀತು.
ಅದನ್ನು ಬಿಟ್ಟು ಬೇರೆ ದಾರಿ ಹಿಡಿದರೆ ಪಟ್ಟಣದ ಅಭಿವೃದ್ಧಿ ಸಮಿತಿಯ ಸದಸ್ಯರು ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ಚನ್ನಬಸಪ್ಪ ಕುಷ್ಟಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಕಾಮಗಾರಿ ಪರಿಶೀಲನಾ ತಂಡದ ಉಮೇಶ ಪಾಟೀಲ, ಶರಣಪ್ಪ ಧರ್ಮಾಯತ, ದಾದಾಸಾಬ್ ನದಾಫ್, ಚಂದ್ರಾಮ ಗ್ರಾಮಪುರೋಹಿತ, ಕಳಕನಗೌಡ ಪೊಲೀಸ್ ಪಾಟೀಲ, ಶೇಕಪ್ಪ ಕೆಂಗಾರ, ರವಿ ಮ್ಯಾಗೇರಿ, ಈಶ್ವರ ಬೆಟಗೇರಿ, ಪ್ರಭುಗೌಡ ನಾಡಗೌಡ್ರ, ಉಮೇಶ ಪಾಟೀಲ, ವೀರಪ್ಪ ಮಾವಿನಕಾಯಿ ಸೇರಿದಂತೆ ಅನೇಕ ಸಾರ್ವಜನಿಕರು ಹಾಜರಿದ್ದರು.
ಬಸವರಾಜ ವಂಕಲಕುಂಟಿ ಮಾತನಾಡಿ, ಕಾಮಗಾರಿಯನ್ನು ಮಂಜೂರು ಮಾಡಿ ನೀವು ಸುಮ್ಮನೆ ಕೂಡ್ರಬೇಡಿ. ಅದರ ಕಡೆಗೆ, ಅದರ ಗುಣಮಟ್ಟದ ಕಡೆಗೆ ಗಮನ ನೀಡಿ. ಇನ್ನು ಮುಂದೆ ಎಲ್ಲಿಯೇ ಕಾಮಗಾರಿ ನಡೆದರೂ ಅಲ್ಲಿಗೆ ಗುಣಮಟ್ಟವನ್ನು ಪರೀಕ್ಷಿಸಲು ನಮ್ಮ ಸಮಿತಿಯ ಸದಸ್ಯರು ಬರುತ್ತಾರೆ. ಅವರು ಒಪ್ಪಿಗೆ ಕೊಟ್ಟ ನಂತರವೆ ನೀವು ಬಿಲ್ಲನ್ನು ಪಾಸ್ ಮಾಡಬೇಕೆ ಹೊರತು ಯಾವ ಕಾರಣಕ್ಕಾದರೂ ಯಾರದೇ ಒತ್ತಡಕ್ಕೆ ಮಣಿದು ಬಿಲ್ ಪಾಸ್ ಮಾಡಬಾರದು ಎಂದರು.