ವಿಜಯಸಾಕ್ಷಿ ಸುದ್ದಿ, ಗದಗ: ಮೇಲ್ನೋಟಕ್ಕೆ ಪ್ರಶಸ್ತಿಯನ್ನು ವ್ಯಕ್ತಿಗೆ ನೀಡಿದ್ದರೂ ಮೂಲಭೂತವಾಗಿ ಪ್ರಶಸ್ತಿ ನೀಡಿರುವುದು ಸಾಧನೆಗೆ ಎಂಬ ಭಾವ ಪ್ರಶಸ್ತಿ ಪಡೆದವರ ಮನದಲ್ಲಿ ಉದ್ಭವಿಸಿದರೆ ಅವರು ಇನ್ನೂ ಹೆಚ್ಚಿನ ಗುಣಮಟ್ಟದ ಸಾಧನೆ ಸಾಧಿಸಲು ಮತ್ತು ಮುನ್ನಡೆಯಲು ಪ್ರೇರಣೆ ದೊರೆಯುತ್ತದೆ. ಇದು ಸಮಾಜ ಪ್ರಗತಿಗೂ ಸಹಕಾರಿಯಾಗುತ್ತದೆ. ಹೀಗಾಗಿ ಪ್ರಶಸ್ತಿಗಳು ಸಾಧಕರ ಸಾಧನೆಯನ್ನು ಇಮ್ಮಡಿಗೊಳಿಸುತ್ತವೆ ಎಂದು ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಶ್ರೀಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗಪಾಠಶಾಲೆ ಗದಗ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ವಿಶೇಷವಾಗಿ ಯೋಗದ ವಿವಿಧ ಕ್ಷೇತ್ರ (ಶಿಕ್ಷಣ ಸಾಹಿತ್ಯ, ಕ್ರೀಡೆ, ಪ್ರದರ್ಶನ, ಸಂಘಟನೆ)ಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಸಾಧಕರಿಗೆ `ಯಳಂದೂರು ಬಸವಲಿಂಗ ಮಹಾಸ್ವಾಮಿಗಳ ಯೋಗ ಸೇವಾ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಧಾರವಾಡ ಕ.ವಿ.ವಿ ಸ್ನಾತಕೋತ್ತರ ಯೋಗ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ ಎಂ.ಪಿ., ಎ.ಇ.ಕಾಂ. ಇಂಡಿಯ ನವದೆಹಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಕಂಠ ಚೌಕಿಮಠ, ರೋಣದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಚಾರ್ಯ ಆಯ್.ಬಿ. ಕೊಟ್ಟೂರಶೆಟ್ಟಿ, ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ಅಮರೇಶ ಅಂಗಡಿ, ಎಸ್.ಎಸ್. ಹಿರೇಮಠ, ಶೇಖಣ್ಣ ಕವಳಿಕಾಯಿ, ಅನ್ನಪೂರ್ಣಕ್ಕ ವರವಿ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ (ವಿಶ್ರಾಂತ) ಡಾ. ಚಂದ್ರಮೌಳಿ ಎಸ್.ನಾಯ್ಕರ (ಧಾರವಾಡ), ಪತಂಜಲಿ ಯೋಗ ಸಮಿತಿ ರಾಜ್ಯಾಧ್ಯಕ್ಷ ಯೋಗಾಚಾರ್ಯ ಭವರಲಾಲ್ ಆರ್ಯ (ಹುಬ್ಬಳ್ಳಿ), ಯೋಗ ಗುರುಗಳಾದ ಸಂಗಮೇಶ ಮೇಲ್ಮುರಿ (ಗದಗ), ಶ್ರೀಕೃಷ್ಣಾ ಯೋಗಾಶ್ರಮ ಸಂಸ್ಥೆ ಸಂಸ್ಥಾಪಕರು ಮತ್ತು ಯೋಗ ತಜ್ಞರಾದ ಬಸವರಾಜ ಹಡಗಲಿ (ಗುಳೇದಗುಡ್ಡ), ಯೋಗ ಸೇವಾಸಕ್ತರಾದ ಚನ್ನಪ್ಪಜ್ಜ ಕಾಳಗಿ (ಶಿರಹಟ್ಟಿ), ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಕ್ರೀಡೆಯಲ್ಲಿ 100ಕ್ಕೂ ಹೆಚ್ಚು ಚಿನ್ನದ ಪದಕ ಪಡೆದಿರುವ ವಿನಾಯಕ ಕೊಂಗಿ (ಹುಬ್ಬಳ್ಳಿ) ಇವರೆಲ್ಲರಿಗೂ ಯೋಗ ಸೇವಾ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.