ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗಳಿಗೆ ಸೇರಿಸಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನಾವೆಲ್ಲರೂ ಕಾಳಜಿ ವಹಿಸಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪೋಷಕರು ಮುಂದಾಗಬೇಕೆಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಹೇಳಿದರು.
ಅವರು ಗುರುವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗಂಗಾಪೂರಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 14 ಇವುಗಳ ಸಂಯೋಗದಲ್ಲಿ ಜರುಗಿದ 1ನೇ ವರ್ಗದ ದಾಖಲಾತಿ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರು ವರ್ಷ ಮೇಲ್ಪಟ್ಟ ಹೆಣ್ಣಿರಲಿ-ಗಂಡಿರಲಿ, ತಪ್ಪದೇ ಪಾಲಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಗುಣಮಟ್ಟದ ಶಿಕ್ಷಣ, ಸಮವಸ್ತ್ರ, ಹಾಲು, ಪಠ್ಯಪುಸ್ತಕ, ಆರೋಗ್ಯಪೂರ್ಣವಾದ ಬಿಸಿಯೂಟ, ಶೂ ಭಾಗ್ಯ, ವಿದ್ಯಾರ್ಥಿ ವೇತನದಂತಹ ಮಹತ್ತರವಾದ ಯೋಜನೆಗಳನ್ನು ಸರಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಉಚಿತವಾಗಿ ವಿತರಣೆ ಮಾಡುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಅವರ ಭವಿಷ್ಯತ್ತನ್ನು ಉಜ್ವಲಗೊಳಿಸಬೇಕು ಎಂದರು.
ಮುಖ್ಯೋಪಾಧ್ಯಾಯ ಬಿ.ಎಸ್. ಮೆಣಸಿನಕಾಯಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಪಾಲಕರ ಸಹಕಾರ ಅತ್ಯವಶ್ಯ. ಉಚಿತ ಸರ್ಕಾರಿ ಸೌಲಭ್ಯದೊಂದಿಗೆ ದಾನಿಗಳ ಸಹಾಯವನ್ನು ಪಡೆಯಲಾಗುತ್ತಿದೆ. ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ದಾಖಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಸಿ. ಚಳಗೇರಿ, ಎಸ್.ಸಿ. ಹಿರೇಮಠ, ಶಿಕ್ಷಕರಾದ ಎಲ್.ಎಚ್. ಮಲ್ಲಾಪೂರ, ಜೆ.ಆರ್. ನೀರಲಗಿ, ಎಸ್.ಎಂ. ಬಸವನಗೌಡ್ರ, ಜೆ.ಎಸ್. ಘೋರ್ಪಡೆ, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕರು ಪಾಲ್ಗೊಂಡಿದ್ದರು.