ವಿಜಯಸಾಕ್ಷಿ ಸುದ್ದಿ, ನರೇಗಲ್ : ಬರುವ ಸಂಬಳ, ಸಿಗುವ ಸೌಲಭ್ಯಗಳ ಬಗ್ಗೆ ಯೋಚಿಸದೆ ಸದಾಕಾಲ ಯಾರು ವಿದ್ಯಾರ್ಥಿಗಳ ಬಗ್ಗೆ ಯೋಚಿಸುತ್ತಾರೆಯೋ ಅವರು ಮಕ್ಕಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆಯುತ್ತಾರೆ. ಇಂಥವರು ನಿಜವಾದ ಶಿಕ್ಷಕರಾಗಿದ್ದು, ಅವರಲ್ಲಿ ಸಮರ್ಪಣಾ ಮನೋಭಾವ ಇದ್ದಾಗ ಮಾತ್ರ ಇಂತಹ ಕಾರ್ಯ ಆಗಲು ಸಾಧ್ಯ. ಆದ್ದರಿಂದ ಶಿಕ್ಷಕರು ಸಮರ್ಪಣಾ ಮನೋಭಾವನೆಯನ್ನು ಹೊಂದಿರಬೇಕಾದುದು ಅವಶ್ಯಕವಾಗಿದ ಎಂದು ಎಸ್.ಎ.ವಿ ಬಾಲಿಕೆಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಸೋಮವಾರ ಜರುಗಿದ ಬೀಚಿ ಬಳಗದ ಮಾಸಿಕ ಸಭೆಯಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಎಲ್ಲರ ಹಾಗೆ ಬರೀ ವೃತ್ತಿಯಲ್ಲ. ಅದೊಂದು ತಪಸ್ಸಿದ್ದಂತೆ. ಹಿಂದಿನ ಜನ್ಮದಲ್ಲಿನ ಪುಣ್ಯದ ಅಂಶವೇನಾದರೂ ಉಳಿದಿದ್ದರೆ ಅಂತಹವರು ಮಾತ್ರ ಶಿಕ್ಷಕರಾಗಲು ಸಾಧ್ಯ. ಇದು ಎಲ್ಲರಿಗೂ ಸುಲಭದಲ್ಲಿ ಲಭಿಸುವಂತಹದಲ್ಲ. ಪಟ್ಟಣದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬೀಚಿ ಬಳಗ ತನ್ನ ವಿಶೇಷ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಪಡೆಯುತ್ತಿದೆ. ಇಂದು ಸನ್ಮಾನಗೊಂಡ ಶಿಕ್ಷಕರು ತಮ್ಮ ಸೇವೆಯಲ್ಲಿರುವಾಗ ತಮ್ಮ ಕರ್ತವ್ಯ ನಿಷ್ಠೆ ಹಾಗೂ ಸಮರ್ಪಣಾ ಮನೋಭಾವನೆಯಿಂದ ಸಮರ್ಪಕ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಸಭೆಯನ್ನುದ್ದೇಶಿಸಿ ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ, ಅಧ್ಯಕ್ಷತೆ ವಹಿಸಿದ್ದ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮಾತನಾಡಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ, ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ, ಜಿ.ಎ. ಬೆಲ್ಲದ, ಈಶ್ವರಪ್ಪ ಇಳಕಲ್ಲ, ಎಸ್.ವಿ. ಕಳಕಣ್ಣವರ, ಎನ್.ಎಸ್. ಹಿರೇಮಠ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ, ಕಾರ್ಯದರ್ಶಿ ಎಚ್.ವಿ. ಈಟಿ, ಮಲ್ಲಯ್ಯ ಗುಂಡಗೋಪುರಮಠ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ಶಿಕ್ಷಕ ವಿ.ಎ. ಕುಂಬಾರ, ಆರ್.ಎಸ್. ನರೇಗಲ್ಲ, ಸಂಚಾಲಕ ಈಶ್ವರ ಬೆಟಗೇರಿ, ಶಿವಾನಂದ ಗೋಗೇರಿ ಮುಂತಾದವರು ಪಾಲ್ಗೊಂಡಿದ್ದರು.
ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಪ್ರಾರ್ಥಿಸಿದರು. ಶಿಕ್ಷಕ ಜೆ.ಎ. ಪಾಟೀಲ ಸ್ವಾಗತಿಸಿದರು. ಬಳಗದ ಹಿಂದಿನ ಅಧ್ಯಕ್ಷ ಡಾ. ಆರ್.ಕೆ. ಗಚ್ಚಿನಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಬಿ.ಟಿ. ತಾಳಿ ಜಕ್ಕಲಿಯ ಅಣ್ಣಯ್ಯ-ತಮ್ಮಯ್ಯ ಪುಸ್ತಕದ ಬಗ್ಗೆ ಮಾತನಾಡಿದರು. ಶಿವಯೋಗಿ ಜಕ್ಕಲಿ ನಿರೂಪಿಸಿದರು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ವಂದಿಸಿದರು.
ಸಭೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಎಚ್.ಎಂ. ರತ್ನಮ್ಮ, ಆರ್.ಬಿ. ಪ್ರಭಣ್ಣವರ, ಶಂಕ್ರಮ್ಮ ಇಳಕಲ್ಲ ಹಾಗೂ ಬಿ.ಆರ್. ರಂಗಣ್ಣವರ ಗುರುಗಳನ್ನು ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದ ಭರತ ಈಶ್ವರ ಬೆಟಗೇರಿ, ಎಸ್.ಎಸ್.ಎಲ್.ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದ ಚೇತನಾ ಮಹಾದೇವಪ್ಪ ಬೇವಿನಕಟ್ಟಿಯವರನ್ನು, ನೂರಕ್ಕೆ ನೂರು ಫಲಿತಾಂಶ ಸಾಧಿಸಿದ ಎಸ್.ಎ.ವಿ ಬಾಲಿಕೆಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಅವರನ್ನು ಸನ್ಮಾನಿಸಲಾಯಿತು.