ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ ವಿಶೇಷ ಸ್ಥಾನ ಹೊಂದಿದೆ. ಪೂಜೆ, ವಿವಾಹ ಸಮಾರಂಭಗಳು ಸೇರಿದಂತೆ ಪ್ರತಿಯೊಂದು ಶುಭಕಾರ್ಯದಲ್ಲೂ ವೀಳ್ಯದ ಎಲೆ ಅನಿವಾರ್ಯವಾಗಿದೆ. ಧಾರ್ಮಿಕ ಮಹತ್ವದ ಜೊತೆಗೆ, ವೀಳ್ಯದೆಲೆ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.
ಇದು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಜೀರ್ಣಕ್ರಿಯೆ ಸುಧಾರಿಸಲು, ಬಾಯಿಯ ದುರ್ವಾಸನೆ ನಿವಾರಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಹಿರಿಯರು ಊಟದ ಬಳಿಕ ವೀಳ್ಯದೆಲೆ ಅಡಿಕೆ ಜಗಿಯುವ ಪದ್ಧತಿ ಅನುಸರಿಸುತ್ತಿದ್ದರು.
ವೀಳ್ಯದೆಲೆ ತಿನ್ನುವುದರಿಂದ ಲಭಿಸುವ ಪ್ರಯೋಜನಗಳು
ಜೀರ್ಣಕ್ರಿಯೆ ಸುಧಾರಣೆ:
ವೀಳ್ಯದೆಲೆಯಲ್ಲಿ ಇರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಹೊಟ್ಟೆಯುಬ್ಬರ ಮತ್ತು ಆಮ್ಲೀಯತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒತ್ತಡ ನಿವಾರಣೆ:
ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯಕ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ಊಟದ ನಂತರ ವೀಳ್ಯದ ಎಲೆ ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಮಧುಮೇಹದ ಅಪಾಯ ಕಡಿಮೆಯಾಗಬಹುದು.
ಬಾಯಿ ದುರ್ವಾಸನೆ ನಿವಾರಣೆ:
ವೀಳ್ಯದ ಎಲೆಗಳ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಬೆಳೆಯುವ ಹಾನಿಕಾರಕ ಜೀವಾಣುಗಳನ್ನು ಕಡಿಮೆ ಮಾಡುತ್ತವೆ. ಇದು ನೈಸರ್ಗಿಕ ಮೌತ್ ಫ್ರೆಶ್ನರ್ನಂತೆ ಕಾರ್ಯನಿರ್ವಹಿಸುತ್ತದೆ.
ದಂತ ಆರೋಗ್ಯ:
ಹಲ್ಲುನೋವು ಮತ್ತು ಒಸಡುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಉಪಕಾರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವುದರಿಂದ ಒಸಡುಗಳು ಬಲಗೊಳ್ಳಬಹುದು.
ದೇಹದ ನಿರ್ವಿಷೀಕರಣ:
ವೀಳ್ಯದೆಲೆಯಲ್ಲಿ ಇರುವ ಟ್ಯಾನಿನ್ಗಳು ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ.
ರೋಗನಿರೋಧಕ ಶಕ್ತಿ ಹೆಚ್ಚಳ:
ಕೆಲವು ಸಂಶೋಧನೆಗಳ ಪ್ರಕಾರ, ವೀಳ್ಯದೆಲೆಗಳು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಆಯುರ್ವೇದದಲ್ಲಿ ಪರಂಪರೆಯಿಂದ ಬಳಸಲಾಗುತ್ತಿದೆ.



