ವಿಜಯಸಾಕ್ಷಿ ಸುದ್ದಿ, ಗದಗ: ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹಾಗೂ ಭಾತರ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ.ಎನ್. ಗೋವಿಂದಾಚಾರ್ಯರರ ನೇತೃತ್ವದಲ್ಲಿ ನಾವು ನಮ್ಮ ನಮ್ಮ ಮಟ್ಟದಲ್ಲಿ ನಮ್ಮ ಸಂಘಟನೆಯಿಂದ ಹಾಗೂ ಗ್ರಾಮದಲ್ಲಿ ಹೇಗೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಬಹುದು ಎಂದು ಇಂತಹ ಭಾರತೀಯ ಸಂಸ್ಕೃತಿ ಉತ್ಸವ ಮಾಡುವ ಮೂಲಕ ಮಾರ್ಗದರ್ಶನ ಮಾಡುತ್ತಿರುವುದು ನಮಗೆ ಪ್ರೇರಣೆ ಕೊಡುವ ವಿಷಯವಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಸಂತಸ ವ್ಯಕ್ತಪಡಿಸಿದರು.
ಇಲ್ಲಿನ ತೋಂಟದಾರ್ಯ ಮಠದ ಮುಂಭಾಗದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವ-7ರ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ದಿ ಮರ್ಚಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಸಿಎ ಕೆ.ಎಸ್. ಚೆಟ್ಟಿ, ಜ. ತೋಂಟದಾರ್ಯ ಮಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ, ಗುರಣ್ಣ ಬಳಗಾನೂರ, ದಿ ರಾಜೀವ ದಿಕ್ಷೀತರ ವಾಹನ ಚಾಲಕ ಮಲ್ಲಾಪೂದ ನೀಲಪ್ಪಗೌಡ ದಾನಪ್ಪಗೌಡ್ರ, ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿರು. ಕಾರ್ಯಕ್ರಮವನ್ನು ರಾಜೀವ ದೀಕ್ಷಿತ ವಿಚಾರ ವೇದಿಕೆ ಸದಸ್ಯ ವಿಶ್ವನಾಥ ಶೀರಿ ನಿರ್ವಹಿಸಿದರು.
ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಖಜಾಂಚಿ ಹಾಗೂ ರಾಜ್ಯ ಸಂಚಾಲಕ ಸಿಎ ಸಿ.ಆರ್. ಢವಳಗಿ ಮಾತನಾಡಿ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್, ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿ ಕಲಬುರಗಿ, ರಾಜೀವ ದೀಕ್ಷಿತ ವಿಚಾರ ವೇದಿಕೆ ಹಾಗೂ ವಿವಿಧ ಸಂಸ್ಥೆಗಳು ಆಯೋಜಿಸುತ್ತಿರುವ ವೈಶಿಷ್ಟಪೂರ್ಣ ಕಾರ್ಯಕ್ರಮವಾದ ಭಾರತೀಯ ಸಂಸ್ಕೃತಿ ಉತ್ಸವ-7 ಜ. 29ರಿಂದ ಫೆಬ್ರುವರಿ 6ರವರಗೆ 9 ದಿನಗಳ ಕಾಲ ಸೇಡಂನ ಬೀರನಹಳ್ಳಿ ಕ್ರಾಸ್ ಬಳಿ ಇರುವ ಪ್ರಕೃತಿ ನಗರದಲ್ಲಿ ಆಯೋಜಿಸಿದ್ದು, ಈ ಕಾರ್ಯಕ್ರಮವು ಸುಮಾರು 250 ಎಕರೆ ಜಾಗದಲ್ಲಿ ನಡೆಯಲಿದ್ದು, 25 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.