ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಬೆಳದಡಿ ಗ್ರಾಮದ ಬ್ರಹ್ಮಾನಂದಪುರ ತಾಂಡಾದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಬಿಗ್ಬಾಸ್ 11ನೇ ಆವೃತ್ತಿಯಲ್ಲಿ ವಿಜಯಶಾಲಿಯಾಗಿ ಉತ್ತರ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಹನುಮಂತ ಲಮಾಣಿ ಅವರ ಭಾವಚಿತ್ರಕ್ಕೆ ಶ್ರೀಸೇವಾಲಾಲ್ ಯುವಕ ಮಂಡಳದವರು ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು.
ಬ್ರಹ್ಮಾನಂದಪುರ ತಾಂಡದ ಶ್ರೀಸೇವಾಲಾಲ್ ಯುವಕ ಮುಂಡಳ, ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನದವರು ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರ ಜನ್ಮದಿನವನ್ನು ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಆಚರಿಸಿದರು.
ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷ ಬಸವಣ್ಣೆಯ್ಯಸ್ವಾಮಿ ಹಿರೇಮಠ ಮಾತನಾಡಿ, ಕನ್ನಡ ಚಿತ್ರರಂಗದ ಪ್ರಾರಂಭದಲ್ಲಿ ಉತ್ತರ ಕರ್ನಾಟಕದ ಹೆಸರಾಂತ ರಂಗಭೂಮಿ ಕಲಾವಿದರಾದ ಯಲಿವಾಳ ಸಿದ್ದಯ್ಯನವರು ಕೃಷ್ಣಗಾರುಡಿ, ಜಗಜ್ಯೋತಿ ಬಸವೇಶ್ವರ ಚಲನಚಿತ್ರದಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದರು. ವೈಜನಾಥ್ ಬಿರಾದರ್ ಸೇರಿದಂತೆ ಸಂಗೀತ ಕ್ಷೇತ್ರದಲ್ಲಿ ಗಂಗೂಬಾಯಿ ಹಾನಗಲ್, ಭೀಮ್ಸೇನ್ ಜೋಶಿ, ಪುಟ್ಟರಾಜ ಕವಿ ಗವಾಯಿಗಳು ಉತ್ತರ ಕರ್ನಾಟಕದ ಕಲೆ ಹಾಗೂ ಸಂಗೀತದ ಕೀರ್ತಿಯನ್ನು ಬಾನೆತ್ತರಕ್ಕೆ ಬೆಳಗಿಸಿದ್ದಾರೆ ಎಂದರು.
ಬೆಂಗಳೂರಿನ ವಿವಿಧ ಟಿವಿ ಚಾನೆಲ್ಗಳು ಇತ್ತೀಚೆಗೆ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ತಾ.ಪಂ ಮಾಜಿ ಸದಸ್ಯರಾದ ಕಮಲಾ ಟಿ.ಪೂಜಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಟಿ.ಡಿ. ಪೂಜಾರ ನೇತೃತ್ವ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ಭೋಜಪ್ಪ ಲಮಾಣಿ, ಮುಖಂಡರುಗಳಾದ ಗೋಪಾಲ ನಾಯಕ, ರಮೇಶ ಲಮಾಣಿ, ಕೃಷ್ಣಪ್ಪ ಜಾಧವ, ಶೀಲವ್ವ ಚವ್ಹಾಣ, ಹೇಮವ್ವ ಚವ್ಹಾಣ, ಉಮಾ ಲಮಾಣಿ, ಮಹಾಂತೇಶ ಚವ್ಹಾಣ, ಲಾಲಪ್ಪ ಬಡಿಗೇರ, ಮಹಾದೇವ ಮಕ್ಕೋಜಿ, ಪ್ರಕಾಶ ಅರ್ಕಸಾಲಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೇವೇಂದ್ರ ತೋಟದ ಸ್ವಾಗತಿಸಿದರು, ಮೋತಿಲಾಲ ಚನ್ನಳ್ಳಿ ವಂದಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತ ಲಮಾಣಿ, ಸದಸ್ಯರಾದ ವಿಠ್ಠಲ ತೋಟದ, ಬಿಜೆಪಿ ಮುಖಂಡರಾದ ಮಂಜುನಾಥ ಹಳ್ಳೂರಮಠ ಮಾತನಾಡಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೈಗೊಂಡ ಅಭಿವೃದ್ಧಿಪರ ಕಾರ್ಯಗಳನ್ನು ಶ್ಲಾಘಿಸಿದರಲ್ಲದೇ, ಜನಪದ ಸಾಹಿತ್ಯವನ್ನು ಲೋಕಕ್ಕೆ ಪರಿಚಯಿಸಿ ಗಮನ ಸೆಳೆದ ಹನಮಂತ ಲಮಾಣಿ ಅವರಿಗೆ ಶುಭ ಕೋರಿದರು.