ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಶಿಕ್ಷಣ ಹಾಗೂ ಆರ್ಥಿಕತೆಯ ಕಡೆಗೆ ಗಮನವಹಿಸಿದರೆ ಸಮಾಜ ಅಭಿವೃದ್ಧಿ ಹೊಂದುತ್ತದೆ ಎಂದು ಕನಕ ಗುರುಪೀಠ ಕಾಗಿನೆಲೆಯ ನಿರಂಜನಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಕಂಚೀಕೆರೆ ಗ್ರಾಮದಲ್ಲಿ ಭಾನುವಾರ ಬೀರೇಶ್ವರ ಸ್ವಾಮಿ ಜಾತ್ರೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಸಮಾಜದಲ್ಲಿ ನಾವು ಮುಖ್ಯವಾಹಿನಿಗೆ ಬರಲು ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ, ನ್ಯಾಯಯುತವಾಗಿ ಪ್ರತಿನಿತ್ಯ ದುಡಿಮೆಯನ್ನು ಮಾಡಿ ಆರ್ಥಿಕವಾಗಿ ಪ್ರಬಲರಾಗಿ, ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ ಉತ್ತಮ ಶಿಕ್ಷಣದ ಜೊತೆಗೆ ಉನ್ನತ ಹುದ್ದೆಗೆ ಸೇರಿಸಿ. ಹಣವನ್ನು ಯಾವ ರೀತಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಸಾಮಾನ್ಯ ಅರಿವು ನಮಗಿರಬೇಕು. ಕೌಟುಂಬಿಕ ಕಲಹಗಳು, ಅಶಾಂತಿ ನೆಲೆಸಿದಲ್ಲಿ ನಮ್ಮ ಮನಸಿನ ನೆಮ್ಮದಿಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ದೇವಸ್ಥಾನಗಳು ಬೇಕು.
ದೇವಸ್ಥಾನದ ಗಂಟೆಯ ಬಡಿಯುವುದು ನಮ್ಮ ಕಾಯಕವಾಗಬಾರದು, ಅದರ ಬದಲಾಗಿ ಶಾಲೆಗಳಲ್ಲಿಯ ಗಂಟೆಯ ಶಬ್ದ ಮೊಳಗಲಿ. ಜೀವನದಲ್ಲಿ ಮುಖ್ಯವಾದ ಶಿಕ್ಷಣವಿದ್ದಾಗ ಸಮಾಜ, ರಾಜ್ಯ, ದೇಶಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸಕ ಗುಳಿಯಪ್ಪ ಹುಲಿಮನಿ ಮಾತನಾಡಿ, ನಮ್ಮ ಸಮಾಜವು ಇಂದಿಗೂ ಮುಂದುವರೆಯದೆ ಇರಲು ಕಾರಣ, ನಮ್ಮ ಮಕ್ಕಳಿಗಿರುವ ಶಿಕ್ಷಣದ ಕೊರತೆ. ಕೇವಲ ಕಷ್ಟಪಟ್ಟು ಶ್ರಮದಿಂದ ದುಡಿದರೆ ಸಾಲದು, ಆರ್ಥಿಕವಾಗಿ ಮುಂದುವರಿಯಲು ಶಿಕ್ಷಣ ಮುಖ್ಯವಾಗಿದೆ ಎಂದರು.
ಹೆಚ್.ಬಿ. ಪರುಸುರಾಮಪ್ಪ, ಎಂ.ನಾಗರಾಜ್, ಜೆ. ಮಂಜಪ್ಪ, ಕೆ. ಕೆಂಚಪ್ಪ, ಎಂ. ಹನುಮಂತಪ್ಪ, ಬಿ. ಅಂಜಿನಪ್ಪ, ಕೆಂಚನಗೌಡ, ಕೊಟ್ರೇಶ್, ಅಲ್ಲಾಭಕ್ಷಿ ಸಾಹೇಬ್, ಡಿ.ದೇವೇಂದ್ರಪ್ಪ, ಮುತ್ತಿಗೆ ಜಂಭಣ್ಣ, ವಕೀಲ ಗೋಣಿಬಸಪ್ಪ, ಚಲವಾದಿ ಹನುಮಂತಪ್ಪ, ವೆಂಕಟೇಶ್ ಬಾರಿಕರ, ಮಂಜಪ್ಪ, ಅರಸೀಕೆರೆ ಪಿಎಸ್ಐ ಕೆ. ರಂಗಯ್ಯ, ಸಮಾಜದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.