ವಿಜಯಸಾಕ್ಷಿ ಸುದ್ದಿ, ಇಂಡಿ: ಮಾನವ ಜೀವನ ಅಮೂಲ್ಯವಾದದ್ದು. ಧರ್ಮದ ಆದರ್ಶ ಮೌಲ್ಯಗಳನ್ನು ಜೀವನದ ಪರಿಪಾಲನೆಯಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ. ಹುಟ್ಟು ಎಷ್ಟು ಸಹಜವೋ ಸಾವು ಕೂಡ ನಿಶ್ಚಿತವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಜೇವೂರು ಗ್ರಾಮದ ಶ್ರೀ ರೇವಣಸಿದ್ದಯ್ಯ ಸ್ವಾಮಿಗಳ 39ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಆಧುನಿಕ ಯುಗದಲ್ಲಿ ಧರ್ಮ ಸಂಸ್ಕೃತಿಗಳ ಬಗ್ಗೆ ನಿರ್ಲಕ್ಷ ಮನೋಭಾವ ಉಂಟಾಗುತ್ತಿದ್ದು, ಎಲ್ಲೆಡೆ ಅಶಾಂತಿ-ಅತೃಪ್ತಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಧರ್ಮವನ್ನು ಪರಿಪಾಲಿಸಿಕೊಂಡು ಬರುವ ಅಗತ್ಯವಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧಾರ್ಮಿಕ ಮತ್ತು ಸಾಮಾಜಿಕ ವಿಚಾರ ಧಾರೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ. ಲಿಂಗೈಕ್ಯ ರೇವಣಸಿದ್ದಯ್ಯ ಸ್ವಾಮಿಗಳು ಧರ್ಮ ಸಂಸ್ಕೃತಿಯ ಸಂವರ್ಧನೆಗಾಗಿ ಸದಾ ಶ್ರಮಿಸಿದವರು. ಜನ ಸಮುದಾಯಕ್ಕೆ ಧಾರ್ಮಿಕ ಸಂಸ್ಕಾರ ಸದ್ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
ಕೈವಲ್ಯ ಧಾಮ ಮಠದ ಟ್ರಸ್ಟಿಗಳು ಪುಣ್ಯಾರಾಧನೆ ಜೊತೆಗೆ 39 ಜೋಡಿ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿರುವುದು ಅವರ ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿದೆ. ಜೀವನದಲ್ಲಿ ಸುಖ-ದುಃಖಗಳು ಬರುವುದು ಸಹಜ. ಪವಿತ್ರವಾದ ಗೃಹಸ್ಥಾಶ್ರಮ ಸ್ವೀಕಾರ ಮಾಡಿದ ನವದಂಪತಿಗಳು ಏನೇ ಸಮಸ್ಯೆ ಬಂದರೂ ಸಾಮರಸ್ಯ ಸೌಹಾರ್ದತೆಯಿಂದ ಬಾಳಿದರೆ ಬಾಳು ಉಜ್ವಲಗೊಳ್ಳುತ್ತದೆ. ಮುತ್ತೆöÊದೆ ಮಹಿಳೆಯರಿಗೆ ಹಸಿರು ಬಳೆ, ಕುಂಕುಮ, ಕರಿಮಣಿ ಸರ, ಮೂಗುನತ್ತು, ಕಾಲುಂಗುರ ಮತ್ತು ಮಾಂಗಲ್ಯಗಳನ್ನು ಕೊಟ್ಟ ಕೀರ್ತಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹಠಯೋಗಿ ಶ್ರೀ ರೇವಣಸಿದ್ದೇಶ್ವರ ಶ್ರೀಗಳವರ ಗದ್ಯಪದ್ಯ ಪುರಾಣ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು. ಚಿಟಗುಪ್ಪ ಆಲಮೇಲ ಹತ್ತಳ್ಳಿ ತಡವಲಗ ಸೇರಿದಂತೆ ಶ್ರೀಗಳು ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ಎಂ.ಆರ್. ಪಾಟೀಲ್, ವಿಠಲಗೌಡ ಪಾಟೀಲ್, ಧನರಾಜ ಮುಜಗೊಂಡ ಇನ್ನೂ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜಗದ್ಗುರುಗಳಿಂದ ಆಶೀರ್ವಾದ ಪಡೆದರು.