ವಿಜಯಸಾಕ್ಷಿ ಸುದ್ದಿ, ಗದಗ : ಅಧಿಕಾರ ಹಿಡಿಯುವದಕ್ಕಾಗಿ ಮತದಾರರಿಗೆ ಆಮಿಷ ಯೋಜನೆಗಳನ್ನು ಜಾರಿ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಪ್ರತಿಯೊಬ್ಬರಿಂದಲೂ ಹಗಲು ದರೋಡೆ ಮಾಡುತ್ತಿರುವದನ್ನು ನಿಲ್ಲಿಸಲಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾಲ್ಲಾಪೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೇವು, ಧಾನ್ಯ, ಹಿಂಡಿ ಬೆಲೆ, ಆಳಿನ ಕೂಲಿ ಹೆಚ್ಚಾಗಿರುವ ಕಾರಣ ಪಶುಪಾಲನೆ ಲಾಭದಾಯಕವಾಗಿ ಉಳಿದಿಲ್ಲ. ಪರ್ಯಾಯ ಆದಾಯವೂ ಇಲ್ಲದೆ ಉಪಕಸುಬಾಗಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಕಾರಣ, ರೈತರ ಹಿತ ಕಾಪಾಡುವದು ಸರ್ಕಾರದ ಹೊಣೆಗಾರಿಕೆಯಾಗಿದ್ದು ಹೆಚ್ಚುವರಿ ಹಾಲಿನ ದರದ ಹಣವನ್ನು ಹಾಲಿನ ಉತ್ಪಾದಕರಿಗೆ ನೀಡಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಜೊತೆಗೆ 4 ಸಾವಿರ ರೂ ಸಹಾಯಧನ ಯೋಜನೆ, 11 ಲಕ್ಷ ರೈತ ಕುಟುಂಬಗಳ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿದಿ, ಕಿಸಾನ್ ಕ್ರೆಡಿಟ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆ, ರೈತ ಶಕ್ತಿ ಯೋಜನೆಗಳನ್ನು ಸ್ಥಗಿತಗೊಳಿಸಿದ ಸಿದ್ದರಾಮಯ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ.ನಂತೆ ನೀಡುವ ಸಹಾಯಧನವನ್ನು ಈವರೆಗೂ ನೀಡದೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.
ಏರಿಕೆ ಮಾಡಿರುವ ಹಾಲಿನ ಬೆಲೆಯ ಹಣವನ್ನು ಉತ್ಪಾದಕ ರೈತರಿಗೆ ನೀಡುವ ಆದೇಶವನ್ನು ಸರ್ಕಾರ ಕೂಡಲೇ ಹೊರಡಿಸಬೇಕು ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದ ರೈತಪರ ಯೋಜನೆಗಳನ್ನ ಮರಳಿ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.



