ಗದಗ: ತಾಲೂಕಿನ ಹೊಂಬಳ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದ್ದು, ಕ್ರೂಷರ್ ವಾಹನದಲ್ಲಿ ಮಲಗಿದ್ದ ಬಾಲಕ ಬೆಂಕಿಗೆ ಆಹುತಿಯಾದ ದುರ್ಘಟನೆ ನಡೆದಿದೆ.
ಸೊಳ್ಳೆ ಬತ್ತಿ ಹಚ್ಚಿಕೊಂಡು ವಾಹನದ ಒಳಗೆ ಮಲಗಿದ್ದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ವಾಹನವೇ ಸುಟ್ಟು ಕರಕಲಾಗಿದೆ. ಈ ದುರ್ಘಟನೆಯಲ್ಲಿ ವಾಹನದೊಳಗೆ ಮಲಗಿದ್ದ ಸದಾನಂದ ಉಪ್ಪಾರ್ (14) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಾಹನದ ಮೇಲ್ಭಾಗದಲ್ಲಿ ಮಲಗಿದ್ದ ಅಣ್ಣ ಮೈಲಾರಿ ಉಪ್ಪಾರ್ (16) ಬೆಂಕಿ ಕಾಣುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇವರು ಮೂಲತಃ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿಗಳಾಗಿದ್ದು, ಹೊಂಬಳ ಗ್ರಾಮದಲ್ಲಿರುವ ಅಜ್ಜ-ಅಜ್ಜಿ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



