ಆನೇಕಲ್: ಕುಡಿಯಲು ಹಣ ನೀಡದ ವಿಚಾರಕ್ಕೆ ಜಗಳವಾದ ನಂತರ, ಗೆಳೆಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ದೃಶ್ಯ ಕಂಡು ಮನಸ್ಸು ತಾಳಲಾರದ ಲಿವಿನ್ ಗೆಳತಿ ಕೂಡ ನೇಣು ಬಿಗಿದುಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಕೇಶ್ ಪಾತ್ರ (23) ಹಾಗೂ ಸೀಮಾ ನಾಯಕ್ (25) ಎಂದು ಗುರುತಿಸಲಾಗಿದೆ. ಇಬ್ಬರೂ ಒಡಿಶಾ ಮೂಲದವರಾಗಿದ್ದು, ಲಿವಿಂಗ್ ಟುಗೆದರ್ನಲ್ಲಿ ವಾಸಿಸುತ್ತಿದ್ದರು.
ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ ಗಾಜು ಒಡೆದು ಒಳನುಗ್ಗಿದಾಗ, ಇಬ್ಬರೂ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ, ಆನೇಕಲ್ ಡಿವೈಎಸ್ಪಿ ಮೋಹನ್ ಕುಮಾರ್, ಹಾಗೂ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ರಾಕೇಶ್ ಪದೇಪದೇ ಕುಡಿಯಲು ಹಣಕ್ಕಾಗಿ ಸೀಮಾಳೊಂದಿಗೆ ಜಗಳ ಮಾಡುತ್ತಿದ್ದ. ಕಳೆದ ಭಾನುವಾರವೂ ಇದೇ ವಿಚಾರಕ್ಕೆ ಜಗಳ ನಡೆದಿತ್ತು. ನಂತರ ಸೀಮಾ ಮಲಗಿದ್ದು, ಬೆಳಿಗ್ಗೆ ಎದ್ದಾಗ ರಾಕೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದ. ಹಗ್ಗ ಕತ್ತರಿಸಿ ಬದುಕಿಸಲು ಪ್ರಯತ್ನಿಸಿದರೂ ವಿಫಲಳಾಗಿದ್ದಳು. ಬಳಿಕ ಅವಳೂ ಅದೇ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.