ಗದಗ: ಶಿರಹಟ್ಟಿ ತಾಲ್ಲೂಕು ಪಂಚಾಯಿತಿಯಲ್ಲಿ 2023–24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನುದಾನದ ದುರ್ಬಳಕೆಯ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆಯಿಂದ 7 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
2023-24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ತಾಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನದಡಿ ಮಂಜೂರಾದ ಒಟ್ಟು ₹2,16,97,377 ಅನುದಾನದಲ್ಲಿ ₹1,97,20,382 ಕಳಪೆ ಗುಣಮಟ್ಟದ ಸಾಮಗ್ರಿ ಸರಬರಾಜು ಮಾಡಿ ಮತ್ತು ಕಳಪೆ ಕಾಮಗಾರಿಗಳನ್ನು ನಿರ್ವಹಿಸುವ ಮೂಲಕ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ನಾಲ್ವರು ಮುಖ್ಯ ಆರೋಪಿಗಳ ಹೆಸರಿನಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯ ಪಶುವೈದ್ಯಾಧಿಕಾರಿ ಡಾ. ಎನ್.ಹೆಚ್. ಓಲೇಕಾರ್ ಈ ಹಿಂದೆ ಶಿರಹಟ್ಟಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು, ಸದ್ಯ ಧಾರವಾಡದಲ್ಲಿ ಪ್ರಸ್ತುತ ಸಹಾಯಕ ಅಭಿಯಂತರರಾಗಿರುವ ಈ ಹಿಂದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಕಿರಿಯ ಅಭಿಯಂತರ ಆರೀಫ್ ಹಿರೇಹಾಳ,
ಸಂಜಯ್ ಎಂಟರ್ಪ್ರೈಸಸ್ ಹಾಗೂ ವಿ.ವಿ. ಸೇಲ್ಸ್ ಅಂಡ್ ಸರ್ವೀಸಸ್ ಮಾಲೀಕರಾದ ಲಕ್ಕುಂಡಿಯ ಗಂಗಪ್ಪ ಬಸವಣ್ಣೆಪ್ಪ ತಡಹಾಳ, “ನಂದಿ ಇನ್ಪಾಸ್ಟ್ರಕ್ಚರ್ ವಿಜಯನಗರ” ಹೆಸರಿನಲ್ಲಿ ಖೊಟ್ಟಿ ವರದಿ ನೀಡಿದ್ದ ಅನಧಿಕೃತ ಥರ್ಡ್ ಪಾರ್ಟಿಯ ಪರಿಶೀಲಕ ಪ್ರದೀಪಕುಮಾರ್ ಬಸವರಾಜಯ್ಯ ಹಿರೇಮಠ, ಇವರೊಂದಿಗೆ ಮತ್ತಷ್ಟು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೂ ಆರೋಪ ಇದೆ.
ಈ ಪ್ರಕರಣದ ತನಿಖೆಯ ಭಾಗವಾಗಿ, ಇಂದು ಧಾರವಾಡ ಲೋಕಾಯುಕ್ತ SP ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಮತ್ತು ಗದಗ ಲೋಕಾಯುಕ್ತ DSP ವಿಜಯಕುಮಾರ್ ಬಿರಾದಾರ್ ನೇತೃತ್ವದಲ್ಲಿ ವಿಶೇಷ ದಾಳಿ ನಡೆದಿದೆ.
ತಂಡವು ಶಿರಹಟ್ಟಿ ಪಶು ಆಸ್ಪತ್ರೆ, ಮತ್ತು ಇಓ ಓಲೇಕಾರ್ ಅವರಿಗೆ ಸೇರಿದ ಎರಡು ಮನೆಗಳು, ಲಕ್ಕುಂಡಿ, ಧಾರವಾಡ ಹಾಗೂ ಗದಗ ಸೇರಿದಂತೆ ಒಟ್ಟು ಏಳು ಸ್ಥಳಗಳಲ್ಲಿ ಬೆಳಗಾವಿ, ಧಾರವಾಡ ಮತ್ತು ಗದಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ದಾಖಲೆಗಳ ಪರಿಶೀಲನೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಎಸ್ ಎಸ್ ತೇಲಿ, ಪರಮೇಶ್ವರ ಕವಟಗಿ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡರ್, ವಿ ಎಸ್ ದೀಪಾಲಿ, ಯು ಎನ್ ಸಂಗನಾಳ, ಎನ್ ಪಿ ಅಂಬಿಗೇರ, ಎಮ್ ಎಸ್ ಗಾರ್ಗಿ, ಟಿ ಎನ್ ಜವಳಿ, ಹೆಚ್ ಐ ದೇಪುರವಾಲಾ, ಎಮ್ ಬಿ ಬಾರಡ್ಡಿ, ಪಿ ಎಲ್ ಪಿರಿಮಾಳ, ಎಸ್ ವಿ ನೈನಾಪೂರ, ಐ ಎಸ್ ಸೈಪಣ್ಣವರ್, ಎಮ್ ಆರ್ ಹಿರೇಮಠ ಇದ್ದರು.



