ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣ ಸೇರಿದಂತೆ ಹೋಬಳಿಯಾದ್ಯಾಂತ ಗುರುವಾರ ಶ್ರದ್ಧಾಭಕ್ತಿ ಮತ್ತು ಸಂಭ್ರಮದೊಂದಿಗೆ ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ಈದ್ ಉಲ್ ಫಿತ್ರ್ (ರಂಜಾನ್ ಹಬ್ಬ)ವನ್ನು ಆಚರಣೆ ಮಾಡಿದರು.
ನರೇಗಲ್ಲ, ಅಬ್ಬಿಗೇರಿ, ಯರೇಬೇಲೇರಿ, ಕುರುಡಗಿ, ಡ.ಸ. ಹಡಗಲಿ, ನಿಡಗುಂದಿ, ಜಕ್ಕಲಿ, ಮಾರನಬಸರಿ, ಗುಜಮಾಗಡಿ, ಹೊಸಳ್ಳಿ, ಹಾಲಕೇರಿ, ಕೋಚಲಾಪೂರ ಮೊದಲಾದ ಕಡೆಗಳಲ್ಲಿ ಹಬ್ಬದ ಖುಷಿ ಮನೆ ಮಾಡಿತ್ತು. ಮುಸ್ಲಿಂ ಬಾಂಧವರು ಹಿಂದೂ ಬಾಂಧವರನ್ನು ತಮ್ಮ ಮನೆಗೆ ಕರೆದು ರಂಜಾನ್ ಹಬ್ಬದ ವಿಶೇಷ ಶೀರ್ ಕೂರ್ಮಾ (ಸುರ್ ಕುಂಬಾ) ಕೊಟ್ಟು, ಊಟ ಮಾಡಿಸಿ, ಭ್ರಾತೃತ್ವ ಮೆರೆದರು.
ನರೇಗಲ್ಲ ಪಟ್ಟಣ ಗದಗ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಏಕಕಾಲಕ್ಕೆ ಸಾಮೂಹಿಕ ಪ್ರಾರ್ಥನೆ ಮಾಡಿದರು. ದರಗಾದ ಮಂಜೂರ ಹುಸೇನ ಶ್ಯಾವಲಿ ಶರಣರು ಆಶೀರ್ವಚನ ನೀಡಿ, ಪವಿತ್ರ ರಂಜಾನ್ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತದೆ. ಈ ತಿಂಗಳಲ್ಲಿ ಉಪವಾಸ ಮಾಡಿದರೆ ಸಂಕಷ್ಟಗಳು ಕಡಿಮೆಯಾಗುತ್ತವೆ. ಈ ತಿಂಗಳಲ್ಲಿ ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ನರೇಗಲ್ಲ ದರಗಾದ ಮಂಜೂರ್ ಹುಸೇನ್ಶಾವಲಿ ಶರಣರು, ನಿವೃತ್ತ ಶಿಕ್ಷಕ ಎ.ಆಯ್. ರಾಹುತ್, ಎ.ಎ. ನವಲಗುಂದ, ಶಿವನಗೌಡ ಪಾಟೀಲ, ಶರಣಪ್ಪ ಬೆಟಗೇರಿ, ಹನುಮಂತ ಅಬ್ಬಿಗೇರಿ, ಕಳಕನಗೌಡ ಪೊಲೀಸ್ ಪಾಟೀಲ, ಶೇಖಪ್ಪ ಕೆಂಗಾರ, ನಿಂಗಪ್ಪ ಲಕ್ಕನಗೌಡ್ರ, ನಜೀರಸಾಬ ಹದ್ಲಿ, ಸಿಕಂದರ ಕುದರ, ದಾವುದಲಿ ಕುದರಿ, ಹಟೇಲಸಾಬ ಲತೀಫಸಾಬನ್ನವರ, ಖಾದರ್ಬಾಷಾ ಹೂಲಗೇರಿ, ಖಾದೀರಸಾಬ್ ಬನ್ನಿಗೋಳ, ಪೀರಸಾಬ ರಾಹುತ್, ಅಬ್ದುಲ್ಗನಿ ಕುದರಿ, ಗಫಾರ ಬಾಲೇಸಾಬನವರ, ಅಬ್ಬುಲ್ಸಾಬ ರವಡೂರ, ಪೀರಸಾಬ ನದಾಫ, ರೈಮಾನಸಾಬ ತಹಸೀಲ್ದಾರ, ಹಸನಸಾಬ ಕೊಪ್ಪಳ, ಮೊಹ್ಮದ್ ನಶೇಖಾನ ಅಲ್ಲಾಭಕ್ಷಿ ನದಾಫ, ಅಬ್ದುಲ್ರಹಿಮಾನ ನವಲಗುಂದ, ಕೊಪ್ಪದ, ಮಹಬೂಬ ಹೊಸಮನಿ, ರೈಮಾನಸಾಬ ಕುಂದಗೋಳ, ಇಮಾಮಹುಸೇನ ಹಜರತ್, ಕಾಶೀಂಸಾಬ ಹೊಸಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ರಂಜಾನ್ ಹಬ್ಬದ ನಿಮಿತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನರೇಗಲ್ಲ ಪೊಲೀಸ್ ಠಾಣಾ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಿದ್ದರು.
ಈದ್ಗಾದಲ್ಲಿ ವಿಶೇಷ ಪ್ರಾರ್ಥನೆ ಮುಗಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯನ್ನು ವಿನಿಯಮ ಮಾಡಿಕೊಂಡರು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಉಪವಾಸ ರೋಜಾ ಆಚರಣೆಯನ್ನು ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನೆರವೇರಿಸಿಕೊಂಡು ಬಂದಿದ್ದರು. ಹಬ್ಬದ ಮುನ್ನಾ ದಿನವೇ ಅದನ್ನು ಪೂರ್ಣಗೊಳಿಸಿ ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ ಇದಕ್ಕೆ ತೆರೆ ಬಿದ್ದಿತು.