ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪಟ್ಟಣದಲ್ಲಿ ಕಳೆದ 2 ದಿನಗಳಿಂದ ನಡೆಯುತ್ತಿದ್ದ ಹಜರತ್ ಮೆಹಬೂಬ ಸುಬ್ಹಾನಿ ಉರುಸ್ಗೆ ಮಂಗಳವಾರ ನಡೆದ ತವಾಫ್ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಂ ಭಕ್ತರು ಸಂಭ್ರಮದ ಉರುಸ್ ಆಚರಣೆ ಮಾಡಿದರು.
ಪಟ್ಟಣವು ಭಾವೈಕ್ಯತೆಯ ಪ್ರತೀಕವಾಗಿದೆ. ನೆರೆಯ ರಾಜ್ಯ ಮತ್ತು ಜಿಲ್ಲೆಗಳಿಂದ ಸಹಸ್ರಾರು ಭಕ್ತರನ್ನು ಹೊಂದಿರುವ ಕರ್ತೃ ಶ್ರೀ ಜ.ಫಕೀರೇಶ್ವರರ ಮಹಾಸಂಸ್ಥಾನ ಮಠ ಹಾಗೂ ಹಜರತ್ ಮೆಹಬೂಬ ಸುಬ್ಹಾನಿ ದರ್ಗಾ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಹೀಗಾಗಿ, ಎರಡೂ ಧಾರ್ಮಿಕ ಸ್ಥಳಗಳಿಗೆ ಇಲ್ಲಿ ಹಿಂದೂ-ಮುಸ್ಲಿಂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ವಿಶೇಷ.
ಉರುಸ ಪ್ರಯುಕ್ತ ರವಿವಾರ ರಾತ್ರಿ ನಡೆದ ಗಂಧದ ಕಾರ್ಯಕ್ರಮದಲ್ಲಿಯೂ ಸಹ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕೆಳಗೇರಿ ಓಣಿಯ ದರ್ಗಾದಿಂದ ಮೆರವಣಿಗೆಯು ಸೋಮವಾರ ಬೆಳಗಿನ ಜಾವ ಮೆಹಬೂಬಸುಬಾನಿ ದರ್ಗಾವರೆಗೆ ನಡೆಯಿತು. 2ನೇ ದಿನವಾದ ಸೋಮವಾರ ಉರುಸು ನಡೆಯಿತು, ಕೊನೆಯ ದಿನ ಮಂಗಳವಾರ ವಿಶೇಷವಾಗಿ ಹಿಂದೂ ಭಕ್ತರು ತಮ್ಮ ಮನೆಯಿಂದ ದರ್ಗಾದವರೆಗೂ ದೀಡ ನಮಸ್ಕಾರ ಹಾಕುವುದು, ಇನ್ನೂ ಕೆಲವರು ಸಂತಾನ ಪ್ರಾಪ್ತಿಗಾಗಿ ಹರಕೆಯನ್ನು ಹೊತ್ತಿದ್ದು, ತಮ್ಮ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳ ತೂಕದಷ್ಟು ಸಕ್ಕರೆ ಹಾಗೂ ಬೆಳ್ಳಿಯ ಕುದುರೆ ಅಥವಾ ಕಡಗಗಳನ್ನು ಕಾಣಿಕೆಯಾಗಿ ಸಮರ್ಪಿಸಿದರು.