ಗದಗ: ಇಂದು ಬದಾಮಿ ಬನಶಂಕರಿ ದೇವಿ ರಥೋತ್ಸವದ ಹಿನ್ನೆಲೆಯಲ್ಲಿ ದೇವಿಯ ತವರೂರು ಮಾಡಲಗೇರಿ ಗ್ರಾಮ ಸಡಗರ–ಸಂಭ್ರಮದಿಂದ ಕಂಗೊಳಿಸಿತು. “ತವರೂರಿನ ಹಗ್ಗ ಹೋದ್ರೆ ಮಾತ್ರ ಬನಶಂಕರಿ ರಥೋತ್ಸವ” ಎಂಬ ಶತಮಾನಗಳ ಪರಂಪರೆಯಂತೆ, ರಥ ಎಳೆಯುವ ಹಗ್ಗವನ್ನು ಮಾಡಲಗೇರಿಯಿಂದ ಐತಿಹಾಸಿಕ ಬದಾಮಿ ಬನಶಂಕರಿ ದೇವಾಲಯದತ್ತ ಅದ್ಧೂರಿಯಾಗಿ ಸಾಗಿಸಲಾಯಿತು.
ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಹಗ್ಗ ಸಾಗಾಟಕ್ಕೆ ಭರ್ಜರಿ ಮೆರವಣಿಗೆ ಆಯೋಜಿಸಲಾಗಿತ್ತು. ಹಗ್ಗ ಸಾಗಿಸುವ ಎತ್ತಿನ ಬಂಡಿಯನ್ನು ಬಾಳೆ ಗಿಡ, ತಳಿರು ತೋರಣ, ಹೂವುಗಳಿಂದ ಸಿಂಗಾರ ಮಾಡಲಾಗಿದ್ದು, ಕಟ್ಟು ಮಸ್ತಾದ ಎತ್ತುಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.
ಹಗ್ಗ ಹಾಗೂ ಅದನ್ನು ಹೊತ್ತ ಬಂಡಿಗೆ ಪೂಜೆ ಸಲ್ಲಿಸಿ, ಬ್ಯಾಂಡ್, ಹಲಗೆ ಮಜಲುಗಳ ಅಬ್ಬರ, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದರು. ಶತಮಾನಗಳಿಂದ ಪುಂಡಿ ನಾರಿನಿಂದ ತಯಾರಿಸಲಾದ ರಥೋತ್ಸವದ ಹಗ್ಗವನ್ನು ಹದಿನಾರು ಎತ್ತುಗಳ ಹೂಡಿ ಬಂಡಿಯಲ್ಲಿ ಎಳೆಯುತ್ತಾ ಸಾಗಿಸುವ ದೃಶ್ಯ ಭಕ್ತರನ್ನು ಮಂತ್ರಮುಗ್ಧಗೊಳಿಸಿತು.
ಮಲಪ್ರಭಾ ನದಿಯ ಮಾರ್ಗವಾಗಿ ಎತ್ತಿನ ಬಂಡಿಯಲ್ಲಿ ರಥ ಹಗ್ಗವನ್ನು ಸಾಗಿಸಿ, ಬದಾಮಿ ಬನಶಂಕರಿ ದೇವಾಲಯಕ್ಕೆ ತಲುಪಿಸುವ ಈ ಐತಿಹಾಸಿಕ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.



