ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶ್ರದ್ಧೆ, ಪ್ರಾಮಾಣಿಕ ಪ್ರಯತ್ನ ಹಾಗೂ ಗುರುವಿನ ಆಶೀರ್ವಾದಿಂದ ಸಾಮಾನ್ಯನೋರ್ವ ಅಸಮಾನ್ಯನಾಗಿ ಬೆಳೆಯಬಲ್ಲ ಎಂಬುದಕ್ಕೆ ಮಾಜಿ ಶಾಸಕರಾಗಿದ್ದ ದಿ.ಯಜಮಾನ್ ಗೂಳಪ್ಪ ಉಪನಾಳ ಶಾಶ್ವತ ನಿದರ್ಶನವಾಗಿ ಉಳಿಯುತ್ತಾರೆ. ಅವರ ಕಾರ್ಯ ಪ್ರೇರಣೆ ಇಂದಿಗೂ ಬಹು ಜನರಿಗೆ ಬದುಕಿನ ದಾರಿದೀಪ ಎನಿಸಿದೆ ಎಂದು ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ಚೇರಮನ್ ಪುಲಿಕೇಶಿ ಗೂಳಪ್ಪ ಉಪನಾಳ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶಾಂತಿಧಾಮ ವೃದ್ಧಾಶ್ರಮದಲ್ಲಿ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ದತ್ತಿ ಉಪನ್ಯಾಸಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿ, ಯಜಮಾನ ಜಿ.ಎಫ್. ಉಪನಾಳ ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರು ಮಾಡಿದ ಕಾರ್ಯ, ಸೇವೆ ಹಾಗೂ ಧೀಮಂತ ವ್ಯಕ್ತಿತ್ವದ ಮೂಲಕ ಎಂದಿಗೂ ಜೀವಂತವಾಗಿ ಉಳಿಯುತ್ತಾರೆ. ಅಳಿದ ಮೇಲೂ ಉಳಿಯುವ ಶ್ರೇಷ್ಠ ಸೇವೆಯನ್ನು ಅವರು ಸಮರ್ಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಾವಕ್ಕ ಪಕೀರಪ್ಪ ಉಪನಾಳ ದತ್ತಿ ವಿಷಯವಾದ `ಮಹಿಳಾ ಸಬಲೀಕರಣ-ನಾಡಿನ ಸ್ವಾಭಿಮಾನ’ ಕುರಿತು ಮಾತನಾಡಿದ ಸಾಹಿತಿ, ವಿಶ್ರಾಂತ ಮುಖ್ಯೋಪಾಧ್ಯಾಯೆ ಡಿ.ಎಫ್. ಪಾಟೀಲ ಮಾತನಾಡಿ, ನಾಡಿನ ಅಭಿವೃದ್ಧಿ ಸಾಧಿತವಾಗಬೇಕಾದರೆ ಮಹಿಳಾ ಸಬಲೀಕರಣವೇ ಗುರಿಯಾಗಿರಬೇಕು. ಮಹಿಳೆ ಸಬಲವಾದರೆ ಮಾತ್ರ ನಾಡು ಪ್ರಬಲವಾಗುವದು ಎಂದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ, ಲಕ್ಷ್ಮೇಶ್ವರ ತಾಲೂಕ ಕ.ಸಾ.ಪ ಘಟಕ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬರುತ್ತಿದ್ದು, ಕರ್ನಾಟಕ ನಾಮಕರಣದ 50ನೇ ವರ್ಷ ಆಚರಣೆಯ ಅಂಗವಾಗಿ ಈ ವರ್ಷ 50 ವಿಶಿಷ್ಠ ಕಾರ್ಯಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುರಸಭಾ ಸದಸ್ಯ ಪ್ರವೀಣ ಬಾಳಿಕಾಯಿ, ವಿಶ್ರಾಂತ ಮುಖ್ಯೋಪಾಧ್ಯಾಯೆ ಸಾವಿತ್ರಿಬಾಯಿ ನೇಕಾರ ಅತಿಥಿಪರ ನುಡಿಗಳನ್ನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಉಪನಾಳ, ಸಾಹಿತಿ ಪೂರ್ಣಾಜಿ ಕರಾಟೆ, ಕ.ರಾ.ವಿ.ಪ ಜಿಲ್ಲಾಧ್ಯಕ್ಷ ರಮೇಶ ರಿತ್ತಿ, ಶಂಕ್ರಪ್ಪ ಗೊರವರ, ಪುರಸಭಾ ಸದಸ್ಯರಾದ ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ, ಸಿ.ಆರ್.ಪಿ ಉಮೇಶ ನೇಕಾರ, ಶಿಕ್ಷಕರ ಸಂಘದ ಗೀತಾ ಹಳ್ಯಾಳ, ಡಾ.ಹೂವಿನ, ನಾರಾಯಣ ಮುದಗಲ್, ನಿಂಗಪ್ಪ ಗೊರವರ, ಎನ್.ಆರ್. ಸಾತಪುತೆ, ವಿ.ವಿ. ಗೊಲ್ಲರ, ವಿ.ಎಂ. ಹೂಗಾರ, ಶರಣಪ್ಪ ಗುಲಗಣ್ಣವರ, ನಂದಾ ಧರ್ಮಾಯತ, ಶೈಲಾ ಆದಿ ಮುಂತಾದವರು ಉಪಸ್ಥಿತರಿದ್ದರು. ಸನ್ನಿಧಿ ಉಮೇಶ ನೇಕಾರ, ಪ್ರಥಮ ಶಿವಪ್ರಕಾಶ ಗುಡಿಗೇರಿ ಪ್ರಾರ್ಥಿಸಿದರು. ಘಟಕದ ಮಂಜುನಾಥ ಚಾಕಲಬ್ಬಿ, ನಾಗರಾಜ ಮಜ್ಜಿಗುಡ್ಡ, ಎಸ್.ಬಿ. ಅಣ್ಣಿಗೇರಿ, ಎನ್.ಪಿ. ಪ್ಯಾಟಿಗೌಡ್ರ, ಪಿ.ಎಚ್. ಕೊಂಡಾಬಿಂಗಿ, ತಮ್ಮನಗೌಡ್ರು ಪಾಟೀಲ, ನಿರ್ಮಲ ಅರಳಿ ನಿರ್ವಹಿಸಿದರು.
`ಬಡವರ ಬಂಧುವಾಗಿ ಶ್ರೀ ಗೂಳಪ್ಪ ಉಪನಾಳ’ ವಿಷಯದ ಕುರಿತು ಉಪನ್ಯಾಸ ನೀಡಿದ ಪ್ರತಿಷ್ಠಾನದ ಉಪಾಧ್ಯಕ್ಷ ಹಾಗೂ ಪತ್ರಕರ್ತ ದಿಗಂಬರ ಪೂಜಾರ ಮಾತನಾಡಿ, ನಿರಕ್ಷರಿಯಾಗಿದ್ದಾಗಿಯೂ ಒಬ್ಬ ಹಳ್ಳಿಯ ಸಾಮಾನ್ಯ ಸೇವಕ ದಿಲ್ಲಿಯನ್ನು ತಲುಪಬಲ್ಲ ಎಂಬುದನ್ನು ಗೂಳಪ್ಪ ಉಪನಾಳ ಸಾಧಿಸಿ ತೋರಿಸಿದ್ದರು.
ಅವರ ಬದುಕು, ಜೀವನ, ಸಾಧನೆಯನ್ನು ಇಂದಿನ ಜನರಿಗೆ ತಿಳಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದರು.