ಮಂಡ್ಯ:– ಸಕ್ಕರೆ ನಾಡು ಮಂಡ್ಯದ ಆಲಕೆರೆ ಗ್ರಾಮದಲ್ಲಿ ಮೊಟ್ಟೆ ನೀಡಿದ್ದಕ್ಕೆ ಸಾಕಷ್ಟು ಮಕ್ಕಳು ಶಾಲೆ ಬಿಟ್ಟಿರುವ ಘಟನೆ ಜರುಗಿದೆ. ಆಲಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಸರ್ಕಾರ ಸರ್ಕಾರಿ ಶಾಲೆಗಳಿಗೆ ಮೊಟ್ಟೆ ಕೊಡುವ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದಾಗಿನಿಂದ ಈ ಗ್ರಾಮದ ಜನರು, ಶಾಲೆಯಲ್ಲಿ ಮೊಟ್ಟೆ ಕೊಡುವುದು ಬೇಡಾ ಎಂದು ಒಕ್ಕೊರಲಿನಿಂದ ತೀರ್ಮಾನ ಮಾಡಿದ್ದರು.
ಏಕೆಂದರೆ ಈ ಶಾಲೆ ಇರುವ 100 ಮೀಟರ್ ಅಂತರದಲ್ಲಿ ವೀರಭದ್ರಸ್ವಾಮಿ ದೇವಸ್ಥಾನವಿದೆ. ಹೀಗಾಗಿ, ದೇವಸ್ಥಾನದ ಸುತ್ತಮುತ್ತ ಮಾಂಸಾಹಾರ ಹಾಗೂ ಮೊಟ್ಟೆಯನ್ನು ಸೇವನೆ ಮಾಡಲ್ಲ. ಶಾಲೆಯಲ್ಲೂ ಮೊಟ್ಟೆಯ ಬದಲಿಗೆ ಇಷ್ಟು ದಿನ ಕಡ್ಲೆ ಮಿಠಾಯಿ ಹಾಗೂ ಬಾಳೆಹಣ್ಣನ್ನು ಕೊಡಲಾಗುತ್ತಿತ್ತು.
ಕಳೆದ 20 ದಿನಗಳ ಹಿಂದೆ ಈ ಶಾಲೆಯಲ್ಲಿ ಓದುವ ಕೆಲ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ, ಅಧಿಕಾರಿಗಳು ಕಾನೂನಿನ ಪ್ರಕಾರ ಮೊಟ್ಟೆ ಕೊಡಲೇಬೇಕೆಂದು, ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆಯನ್ನು ನೀಡಿದ್ದಾರೆ.
ಅಧಿಕಾರಿಗಳ ಈ ನಿರ್ಧಾರ ಇದೀಗ ಇಲ್ಲಿನ ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ, 124 ಮಕ್ಕಳ ಪೈಕಿ 70ಕ್ಕೂ ಅಧಿಕ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಆಲಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಿಡಿಸಿದ್ದಾರೆ. ಇದೀಗ 70ಕ್ಕೂ ಅಧಿಕ ಮಕ್ಕಳನ್ನು ಆಲಕೆರೆಯ ಪಕ್ಕದ ಊರಾದ ಕೀಲಾರ ಗ್ರಾಮದ ಸರ್ಕಾರಿ ಶಾಲೆ ಹಾಗೂ ಇತರ ಶಾಲೆಗಳಿಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಶಾಲಾ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಾಹ್ನದ ಬಿಸಿಯೂಟ ಜಾರಿಗೆ ತಂದಿವೆ. ಜೊತೆಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತಿದೆ. ಪೌಷ್ಠಿಕಾಂಶದ ಆಹಾರ ನೀಡುವ ಉದ್ದೇಶ ಇದರ ಹಿಂದೆ ಇದೆ. ಮಾಂಸಹಾರಿಗಳು ಮೊಟ್ಟೆಯನ್ನು ಸೇವಿಸುತ್ತಾರೆ. ಆದರೇ, ಮಾಂಸಹಾರಿಗಳೇ ಹೆಚ್ಚಾಗಿರುವ ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಶಾಲೆಯಲ್ಲಿ ಮೊಟ್ಟೆ ನೀಡಿಕೆಗೆ ವಿರೋಧ ವ್ಯಕ್ತವಾಗಿದೆ