ವಿಜಯಸಾಕ್ಷಿ ಸುದ್ದಿ, ರೋಣ : ಪಟ್ಟಣದ ಸೌಂದರ್ಯ ವರ್ಧನೆಗೆ ಸ್ವಚ್ಛತೆ ಅವಶ್ಯವಾಗಿದ್ದು, ನಾಗರಿಕ ಸಮುದಾಯ ಕಸವನ್ನು ರಸ್ತೆಗೆ ಚೆಲ್ಲದೆ ಪುರಸಭೆಯಿಂದ ಬರುವ ವಾಹನಗಳಲ್ಲಿ ಹಾಕಬೇಕು ಎಂದು ಪುರಸಭೆ ಸದಸ್ಯ ಸಂಗನಗೌಡ ಪಾಟೀಲ ಹೇಳಿದರು.
ಅವರು ಬುಧವಾರ ಸಂಜೆ ಪೋತರಾಜನ ಕಟ್ಟೆಯ ಬಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಜನ್ಮದಿನಾಚರಣೆ ನಿಮಿತ್ತ ಜರುಗಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಸ್ವಚ್ಛತೆಯಿಂದ ಇದ್ದಾಗ ಮಾತ್ರ ನಾಗರಿಕ ಸಮುದಾಯ ಆರೋಗ್ಯದಿಂದ ಇರಲು ಸಾಧ್ಯ ಎನ್ನುವುದನ್ನು ನಾವೆಲ್ಲರೂ ಅರಿತುಕೊಳ್ಳುವುದು ಅವಶ್ಯಕವಾಗಿದ್ದು, ಈ ದಿಶೆಯಲ್ಲಿ ಪಟ್ಟಣದ ಜನತೆ ತಮ್ಮ ವಾರ್ಡ್ಗಳ ಸ್ವಚ್ಛತೆಯ ಬಗ್ಗೆ ಮುತುವರ್ಜಿ ವಹಿಸಬೇಕು. ಮುಖ್ಯವಾಗಿ ಹಸಿ ಕಸ ಹಾಗೂ ಒಣ ಕಸಗಳನ್ನು ವಿಂಗಡಿಸಿ ಪುರಸಭೆಯ ವಾಹನದಲ್ಲಿ ಹಾಕಬೇಕೇ ಹೊರತು ರಸ್ತೆಗಳಲ್ಲಿ ಎಸೆಯಬೇಡಿ ಎಂದು ಮನವಿ ಮಾಡಿದರು.
ಪುರಸಭೆಯ ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ ಮಾತನಾಡಿ, ಸ್ವಚ್ಛತೆಯ ದೃಷ್ಟಿಯಿಂದ ನಾಗರಿಕ ಸಮುದಾಯ ಸೇರಿದಂತೆ ವ್ಯಾಪಾರಸ್ಥರು ಕೂಡ ಸಹಕರಿಸಬೇಕು. ವ್ಯಾಪರಸ್ಥರು ಅಂಗಡಿಗಳ ಮುಂದಿನ ಕಸವನ್ನು ಕಸ ವಿಲೇವಾರಿ ಮಾಡುವ ಪುರಸಭೆಯ ವಾಹನಗಳಿಗೆ ತಲುಪಿಸಿ. ಇದರಿಂದ ಪಟ್ಟಣದ ಅಂದ ಮತ್ತಷ್ಟು ವೃದ್ಧಿಸುತ್ತದೆ ಎಂದು ಮನವಿ ಮಾಡಿದರು.
ಅಧ್ಯಕ್ಷೆ ಗೀತಾ ಮಾಡಲಗೇರಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಸದಸ್ಯರಾದ ಗದಿಗೆಪ್ಪ ಕಿರೇಸೂರ, ದಾವಲಸಾಬ ಬಾಡಿನ, ಸಂಗಪ್ಪ ಜಿಡ್ಡಿಬಾಗಿಲ, ಮಾಜಿ ಸದಸ್ಯ ಖಾದಿರಸಾಬ ಸಂಕನೂರ, ಅಜೀಜ ಯಲಿಗಾರ, ನಾಮನಿರ್ದೇಶಿತ ಸದಸ್ಯ ಮಾಗಿ, ಮುಖ್ಯಾಧಿಕಾರಿ ರಮೇಶ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.