ವಿಜಯಸಾಕ್ಷಿ ಸುದ್ದಿ, ಗದಗ : ಆಟೋ ಚಾಲಕರ, ಮಾಲಕರ ಕುಂದು-ಕೊರತೆಗಳ ಬಗ್ಗೆ ಸಚಿವ ಎಚ್.ಕೆ. ಪಾಟೀಲ ಮತ್ತು ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಸಚಿವರ ಕಾರ್ಯಾಲಯದಲ್ಲಿ ಸುದೀರ್ಘವಾಗಿ ಚರ್ಚಿಸಿ, ಆಟೋ ಚಾಲಕರ ಕಲ್ಯಾಣ ಮಂಡಳಿಗೆ ನಿಯಮಗಳನ್ನು ರೂಪಿಸಿ ಇನ್ನು ಕೆಲವೇ ದಿನಗಳಲ್ಲಿ ಆಟೋ ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡುವ ಕುರಿತು ಮಹತ್ತರವಾದ ನಿಲುವನ್ನು ಹೊಂದುವುದಾಗಿ ಸಚಿವ ಎಚ್.ಕೆ. ಪಾಟೀಲರು ತಿಳಿಸಿದರು.
ಗದಗ ಜಿಲ್ಲಾ ಆಟೋ ಚಾಲಕರ, ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಉತ್ತರ ಕರ್ನಾಟಕ ಆಟೋ ಚಾಲಕರ ಮಾಲಕರ ಸಂಘದ ಪದಾಧಿಕಾರಿಗಳು ಇಡೀ ರಾಜ್ಯದ ಆಟೋ ಚಾಲಕರ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವದಕ್ಕೆ ಸಾರಿಗೆ ಸಚಿವರು, ಕಾನೂನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಕಾರ್ಯ ರಾಜ್ಯದ ಆಟೋ ಚಾಲಕರ ಬದುಕಿಗೆ ಸ್ಪೂರ್ತಿಯಾಗಿದೆ. ಪ್ರಾಮಾಣಿಕ ಆಟೋ ಚಾಲಕರು ತಮ್ಮ ದುಡಿಮೆಯ ಜೊತೆಗೆ ಸಮಾಜದ ಕೆಲಸ-ಕಾರ್ಯಗಳಲ್ಲಿ ಭಾಗವಹಿಸುವುದರ ಫಲವಾಗಿ ಇಂದು ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಕಲ್ಯಾಣ ಮಂಡಳಿ ಸ್ಥಾಪನೆಗೆ ಫಲ ನೀಡಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ವಾಹನ ಮಾಲಕರ ಸಂಘದ ರಾಜ್ಯಾಧ್ಯಕ್ಷ ನಟರಾಜ ಶರ್ಮಾ ಅಭಿಪ್ರಾಯಪಟ್ಟರು.
ನಿಯೋಗದಲ್ಲಿ ಗದಗ ಜಿಲ್ಲಾ ಆಟೋ ಚಾಲಕರ, ಮಾಲಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ, ಸಹ ಕಾರ್ಯದರ್ಶಿ ರಾಘವೇಂದ್ರ ಗೆಜ್ಜಳ್ಳಿ, ಕೋಶಾಧ್ಯಕ್ಷ ಈರಣ್ಣ ಗೆಜ್ಜೆಳ್ಳಿ, ವಿಜಯ ಬಡಿಗೇರ, ಉತ್ತರ ಕರ್ನಾಟಕ ಆಟೋ ಚಾಲಕರ, ಮಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ಮುಂತಾದವರು ಭಾಗವಹಿಸಿದ್ದರು.