ವಿಜಯಸಾಕ್ಷಿ ಸುದ್ದಿ, ಡಂಬಳ : ಗ್ರಾಮೀಣ ಪ್ರದೇಶಗಳಲ್ಲಿಯೂ ಬೈಕ್ ಕಳ್ಳತನ, ಮನೆ, ಅಂಗಡಿಗಳ ಕಳ್ಳತನ, ಸರಗಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಮೂಲಕ ಸಾರ್ವಜನಿಕರು ವಂಚನೆಗೆ ಒಳಗಾಗುತ್ತಿರುವುದು ಗಣನೀಯವಾಗಿ ಹೆಚ್ಚಳವಾಗುತ್ತಿವೆ. ಇವುಗಳನ್ನು ತಡೆಯಲು ಇಲಾಖೆ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಿಗ್ನಲ್ ಜಂಪ್, ವಾಹನ ಚಾಲಕರಿಂದ ದುಡುಕಿನ ಚಾಲನೆ ಪ್ರಕರಣಗಳು ನಡೆಯುತ್ತಿವೆ. ಸಾರ್ವಜನಿಕರು ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಂಡು ಸುರಕ್ಷಿತವಾಗಿರಬೇಕೆಂದು ಮುಂಡರಗಿ ಪಿಎಸ್ಐ ಸುಮಾ ಎಮ್.ಗೊರಬಾಳ ಹೇಳಿದರು.
ಡಂಬಳ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ ನಗರದಲ್ಲಿ ಗುರುವಾರ `ಅಪರಾಧ ತಡೆ ಮಾಸಾಚರಣೆ’ಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಚಾಲಕರ ಪಕ್ಕದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು, ನಿರ್ಲಕ್ಷ್ಯದಿಂದ ಚಾಲನೆ ಮಾಡುವುದು, ಹೆಲ್ಮೆಟ್ ಧರಿಸದೇ ಇರುವುದು, ಸಿಗ್ನಲ್ ಬ್ರೇಕ್ ಮಾಡುವುದು ಸೇರಿದಂತೆ ಸಂಚಾರ ನಿಯಮಗಳನ್ನು ಪಾಲನೆಯಾಗುತ್ತಿಲ್ಲ. ಮನೆ ಕಳ್ಳತನ ತಡೆಗಟ್ಟುವ ಬಗ್ಗೆ ಪಾಲಿಸಬೇಕಾದ ಕ್ರಮಗಳು, ಮನೆ ಬಾಡಿಗೆ ನೀಡುವಾಗ ಪಾಲಿಸಬೇಕಾದ ಕ್ರಮಗಳು, ವಾಹನ ಕಳ್ಳತನ ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.
ಯಾವುದೇ ತುರ್ತು ಪರಿಸ್ಥಿತಿಗಳಲ್ಲಿ 112ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ನಿತ್ಯ ನಡೆಯುವ ಅಪರಾಧಗಳ ನಿಯಂತ್ರಣಕ್ಕೆ ನಮ್ಮ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ತಮ್ಮ ಬಡಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಜಾಗೃತೆ ವಹಿಸಬೇಕು. ಪಾಲಕರು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗೃತೆ ವಹಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಎಸ್ಐ ವೀರಭದ್ರಪ್ಪ ತಂಟ್ರೆ, ಮುಖಂಡ ನಿಂಗಪ್ಪ ಮಾದರ, ಸೋಮಪ್ಪ ತಳಗೇರಿ, ಕೆಂಚಪ್ಪ ಹಳ್ಳಿಕೇರಿ, ಮರಿಯಪ್ಪ ದೊಡ್ಡಮನಿ, ಸುರೇಶ ದೊಡ್ಡಮನಿ, ಶ್ರೀಕಾಂತ ಪೂಜಾರ, ಕೆಂಚಪ್ಪ ಪೂಜಾರ, ಕೆಂಚಪ್ಪ ದೊಡ್ಡಮನಿ, ದುರಗಮ್ಮ ತಳಗೇರಿ, ಮರಿಯಪ್ಪ ದೊಡ್ಡಮನಿ, ದೇವಪ್ಪ ಬೆನ್ನಹಳ್ಳಿ, ಗೋವಿಂದಪ್ಪ ಘಟ್ಟರಡ್ಡಿಹಾಳ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಇದ್ದರು.