ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಂಪತ್ತು, ಜ್ಞಾನ ಹೊಂದಲು ಗುರುವಿನ ಶ್ರೀರಕ್ಷೆ ಅವಶ್ಯ ಎಂದು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯರು ಹೇಳಿದರು.
ಅವರು ಶುಕ್ರವಾರ ರಾತ್ರಿ ಪಟ್ಟಣದ ಕರೇವಾಡಿಮಠದ ಲಿಂ.ಶ್ರೀ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, `ಧರ್ಮೋ ರಕ್ಷತಿ ರಕ್ಷಿತಃ’ ಎಂಬಂತೆ ಧರ್ಮ ರಕ್ಷಣೆ, ಜಾಗೃತಿ, ಸಂಸ್ಕಾರ, ಸದ್ಗತಿ, ಸನ್ಮಾರ್ಗ, ತ್ರಿವಿಧ ದಾಸೋಹ ಸೇವೆ ನೀಡುವ ಮಠಾಧೀಶರಿಗೆ ಸಲ್ಲಿಸುವ ಭಕ್ತಿಯ ಕಾಣಿಕೆ (ಸೇವೆ) ಸಮಾಜದ ಉಪಯೋಗಕ್ಕೆ ಸಲ್ಲುತ್ತದೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಈ ನಡುವಿನ ಜೀವನದಲ್ಲಿ ಬದುಕಿನ ಸಾರ್ಥಕತೆಗಾಗಿ ಕೈಲಾದ ಮಟ್ಟಿನ ಸಮಾಜ ಸೇವೆ, ಧಾನ, ಧರ್ಮ ಕಾರ್ಯ ಮಾಡಬೇಕು. ಸಮಾಜದ ಉದ್ಧಾರ, ಭಕ್ತರ ಕಷ್ಟ, ನೋವುಗಳು ದೂರವಾಗಿ ಶಾಚಿತಿ, ನೆಮ್ಮದಿಯ ಬದುಕಿಗೆ ಗುರುಗಳ ಕೃಪಾ ಕಾರುಣ್ಯ ಅಗತ್ಯ. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕೈಲಾದ ಅಳಿಲು ಸೇವೆ ಮಾಡುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಕರೇವಾಡಿಮಠದ ನಿಯೋಜಿತ ಉತ್ತರಾಧಿಕಾರಿ ಮಂಜುನಾಥ ದೇವರು ಮಾತನಾಡಿದರು. ಬೆಳಿಗ್ಗೆ ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವೀಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಶಂಕ್ರಯ್ಯ ಪೂಜಾರ, ಬಸಯ್ಯಶಾಸ್ತ್ರಿ ಸೂರಣಗಿಮಠ ಪೌರೋಹಿತದಲ್ಲಿ ಜಂಗಮ ವಟುಗಳಿಗೆ ಆಯ್ಯಾಚಾರ, ಶಿವದೀಕ್ಷೆ ಕಾರ್ಯಕ್ರಮ ನಡೆಯಿತು.
ರುದ್ರ ಬಳಗದಿಂದ ರುದ್ರ ಪಠಣ ಸೇರಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹರ್ಲಾಪುರದ ಶಾಂಭಯ್ಯ ಹಿರೇಮಠ ಅವರ ಜಾನಪದ ತಂಡದಿಂದ ಜಾಗೃತಿಗಾಗಿ ಜಾನಪದ ಕಾರ್ಯಕ್ರಮ, ಶಾರದಾ ಸ್ವರಾಂಜಲಿ ಸಂಗೀತ ಶಾಲೆ ಮಕ್ಕಳಿಂದ ಸಂಗೀತ ಕಾರ್ಯಕ್ರಮ, ಹಳ್ಳದಕೇರಿ ಓಣಿಯ ಶಕ್ತಿ ಭಜನಾ ಸಂಘ, ಮಾರುತಿ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮಗಳು ನಡೆದವು. ಈ ವೇಳೆ ಸಂಗಯ್ಯ ಹಿರೇಮಠ ಹಿರಿಯರು, ಭಕ್ತರು ಇದ್ದರು. ಶಿವರಾಜಯ್ಯ ಕರೇವಾಡಿಮಠ, ಬಿ.ಟಿ. ಪಾಟೀಲ ನಿರ್ವಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಲಕ್ಷ್ಮೇಶ್ವರ ಕರೇವಾಡಿಮಠದ ಪಟ್ಟಾಧ್ಯಕ್ಷರಾದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಮಾತನಾಡಿ, ಯುವ ಜನಾಂಗ ಗುರು-ಹಿರಿಯರು ತೋರಿದ ಸನ್ಮಾರ್ಗ, ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಮರೆಯಬಾರದು. ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.