ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಮತದಾನ ಅತ್ಯಮೂಲ್ಯವಾದ ಹಕ್ಕು. ಉತ್ತಮ ನಾಳೆಗಳಿಗಾಗಿ ಹಾಗೂ ಸದೃಢ ಆಡಳಿತಕ್ಕಾಗಿ ತಪ್ಪದೇ ಎಲ್ಲರೂ ಮತ ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.
ತಾ.ಪಂ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನಕ್ಕಾಗಿ ಬಿಸಿಯೂಟ ಸಿಬ್ಬಂದಿಗಳ ಕಾಲ್ನಡಿಗೆ ಜಾಥಾ ಹಾಗೂ ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆ ಭೇಟಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದ ತಾ.ಪಂ ಆವರಣದಿಂದ ಆರಂಭವಾದ ಕಾಲ್ನಡಿಗೆ ಜಾಗೃತಿ ಜಾಥಾ ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸುವ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ನಂತರ ಕೊಪ್ಪಳ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕಡ್ಡಾಯ ಮತದಾನಕ್ಕೆ ಘೋಷಣೆಗಳ ಮೂಲಕ ಕರೆ ನೀಡಿದರು.
ನಂತರ ಕಡಿಮೆ ಮತದಾನವಾದ ಅನ್ನದಾನೇಶ್ವರ ನಗರದ 42ರಿಂದ 47ನೇ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ತಪ್ಪದೇ ಮತ ಚಲಾಯಿಸುವಂತೆ ಮನವರಿಕೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬಿಇಒ ಎಚ್.ಎಂ. ಫಡ್ನೇಶಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಡಾ. ರಂಜನಾ ತಳಗೇರಿ, ಮಹೇಶ ಜಕ್ಕಲಿ, ಮಹಾಂತೇಶ ಖೋತ, ಎಚ್.ಎಂ. ಕಾತರಕಿ, ಸಿ.ಬಿ. ಪಾಟೀಲ ಇತರರಿದ್ದರು.