ಬೆಂಗಳೂರು: ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆ ಕಾಂಗ್ರೆಸ್ ಸರಕಾರಕ್ಕೆ ಇಲ್ಲ, ಭ್ರಷ್ಟಾಚಾರ ರಹಿತ ಆಡಳಿತ ಎಂದು ಯಾವ ಬಾಯಲ್ಲಿ ಹೇಳುತ್ತೀರಿ? ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಡಾ ಹಗರಣವನ್ನು ರಾಜ್ಯದ ಜನರು ಮರೆತಿಲ್ಲ ಎಂದ ಅವರು, ನೀವ್ಯಾಕೆ ನಿವೇಶನಗಳನ್ನು ಹಿಂತಿರುಗಿಸಿದ್ದೀರಿ ಎಂದು ಪ್ರಶ್ನಿಸಿದರು.
ಇದು ಭ್ರಷ್ಟಾಚಾರವಲ್ಲವೇ? ಭ್ರಷ್ಟಾಚಾರ ಕುರಿತು ಮಾತನಾಡುವ ಯೋಗ್ಯತೆ, ನೈತಿಕತೆ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂದು ನುಡಿದರು. ನಿಮ್ಮ ಬಣ್ಣ ಬಯಲಾಗಿದೆ. ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಸಂಕಷ್ಟದಲ್ಲಿರುವ ರೈತರ ಮನವಿಗೆ ಸ್ಪಂದಿಸುವ ಕೆಲಸ ನೀವು ಮಾಡಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ- ಜೆಡಿಎಸ್ ಜೊತೆ ಸೇರಿ ಈ ಸರಕಾರದ ಕಿವಿ ಹಿಂಡುತ್ತೇವೆ ಎಂದು ತಿಳಿಸಿದರು.
ದೇಶದಲ್ಲಿ ನ್ಯಾಯಾಲಯದ ವ್ಯವಸ್ಥೆ ಇದೆ. ಸುಪ್ರೀಂ ಕೋರ್ಟ್ ಇದೆ. ಕೇಂದ್ರದಲ್ಲಿ ಯಾವುದೇ ಸರಕಾರ ಇದ್ದರೂ ಯಾವುದೇ ಪುರಾವೆ ಇಲ್ಲದೇ ಈ ರೀತಿ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಗಾಂಧಿ ಕುಟುಂಬವು ಒಂದು ಸಾರ್ವಜನಿಕ ಟ್ರಸ್ಟನ್ನು ಖಾಸಗಿ ಟ್ರಸ್ಟಾಗಿ ಪರಿವರ್ತಿಸಿದೆ. ಟ್ರಸ್ಟಿಗಳನ್ನು ತೆಗೆದುಹಾಕಿ ಇವರಿಗೆ ಬೇಕಾದವರನ್ನು ಟ್ರಸ್ಟಿಗಳನ್ನಾಗಿ ಸೇರಿಸಿದೆ. ಡಿ.ಕೆ.ಶಿವಕುಮಾರರಿಗೆ ಈ ವಿಷಯದಲ್ಲಿ ನೋಟಿಸ್ ಕೊಟ್ಟು ತನಿಖೆಗೆ ಬನ್ನಿ ಎಂದರೆ, ತೇಜೋವಧೆ ಅಥವಾ ರಾಜಕೀಯ ದ್ವೇಷ ಅನಿಸಿದರೆ ಅದು ಮೂರ್ಖತನದ ಪರಮಾವಧಿ.
ಏನಿದೆಯೋ ಅದನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿ, ರಾಜ್ಯ ಸರಕಾರದ ಹುಚ್ಚಾಟಕ್ಕೆ ಶಿಕ್ಷಣ ಕ್ಷೇತ್ರ ಹಾಳಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು. ಇದರ ಪರಿಣಾಮವನ್ನು ಮಕ್ಕಳು ಎದುರಿಸಬೇಕಿದೆ. ಇವೆಲ್ಲವನ್ನೂ ನಾವು ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.



