ಉಡುಪಿ:- ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಶಕ್ತಿ ಯೋಜನೆ ಪರಿಷ್ಕರಣೆ ಮಾಡಲಾಗುತ್ತದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಬ್ಬಾಳಕರ್, ಡಿಕೆ ಶಿವಕುಮಾರ್ ಅವರನ್ನು ನಾವು ಇವತ್ತು ನೋಡುತ್ತಿಲ್ಲ. ಡಿಕೆಶಿ ಅಧ್ಯಕ್ಷರಾದಾಗ ಕೋವಿಡ್ ಇತ್ತು. ಆಗ ರಾಜ್ಯದಲ್ಲಿ ಬಹಳಷ್ಟು ಮಹಿಳೆಯರು ಬೆಲೆ ಏರಿಕೆ ಕುರಿತಾಗಿ ದೂರಿದ್ದರು.
ಈ ಬಗ್ಗೆ ಏನಾದರೂ ಮಾಡಬೇಕು ಎಂದು ಯೋಚಿಸಿ, ಬೆಲೆ ಏರಿಕೆ ಕಡಿಮೆ ಮಾಡಲು ಈ ಯೋಜನೆಗಳನ್ನು ತಂದರು. ಇದರ ಬಗ್ಗೆ ವಿಚಾರ ಮಾಡಿ, ಮಹಿಳೆಯರ ಜೊತೆ ಚರ್ಚೆ, ಸಂವಾದ ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದವರು ಡಿಕೆಶಿವಯರೇ. ಅವರ ಉದ್ದೇಶ ಸ್ಪಷ್ಟವಾಗಿದೆ. ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಪಂಚ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದರು.
ಒಬ್ಬರು, ಇಬ್ಬರು ಮಹಿಳೆಯರು ಹೇಳಿದರೆ ಜನಾದೇಶ ಆಗುವುದಿಲ್ಲ. ಲಕ್ಷಾಂತರ ಮಹಿಳೆಯರು ಇದರ ಉಪಯೋಗ ಪಡೆಯುತ್ತಿದ್ದಾರೆ. ಒಬ್ಬರು ಇಬ್ಬರು ಹೇಳುತ್ತಿದ್ದರೆ ಅವರು ಪ್ರಯಾಣ ಮಾಡುವುದನ್ನು ಬಿಡಲಿ. ದೇವರು ಅವರನ್ನು ಅನುಕೂಲವಾಗಿಟ್ಟಿರಬಹುದು ಒಳ್ಳೆಯದಾಗಲಿ. ನಿಗಮಕ್ಕೆ ಇದರಿಂದ ಯಾವುದೇ ನಷ್ಟವಿಲ್ಲ. ಶಕ್ತಿ ಯೋಜನೆ ಬರುವ ಮುಂಚೆ ನಿಗಮಗಳು ತೊಂದರೆಯಲ್ಲಿದ್ದವು. ಶಕ್ತಿ ಯೋಜನೆ ಬಂದ ನಂತರ ನಿಗಮಗಳು ಚೆನ್ನಾಗಿವೆ ಎಂದು ತಿಳಿಸಿದರು.
ಚುನಾವಣಾ ಪೂರ್ವ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಪಂಚ ಗ್ಯಾರಂಟಿಗಳಿಗೆ ಕರ್ನಾಟಕ ಸರ್ಕಾರವೇ ಮಾದರಿ. ಈ ಮಾದರಿಯನ್ನು ಇಡೀ ದೇಶದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆ ಬಗ್ಗೆ ಯಾವುದೇ ಗೊಂದಲ ಬೇಡ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳು ನಿಲ್ಲುವುದಿಲ್ಲ. ಮುಂದಾಲೋಚನೆ ಇಟ್ಟುಕೊಂಡೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಲು ಜಾರಿಗೆ ತಂದಿದ್ದೇವೆ. ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ಯೋಜನೆಗಳು ಜಾರಿಯಾಗಿವೆ ಎಂದು ಸ್ಪಷ್ಟನೆ ನೀಡಿದರು.