ಬೆಂಗಳೂರು: ಪೊಲೀಸ್ ಇಲಾಖೆಯ ನೈತಿಕತೆ ಕುಸಿಯುವಂತೆ ಕಾಂಗ್ರೆಸ್ ಮಾಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎರಡು ರೀತಿಯ ಕಾಂಗ್ರೆಸ್ ಇದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಕಾಂಗ್ರೆಸ್ ಇತ್ತು. ಈಗ ಜನ ವಿರೋಧಿ, ದೇಶ ವಿರೋಧಿ ಕಾಂಗ್ರೆಸ್ ಇದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಸರ್ಕಾರ ಸಂಪೂರ್ಣ ಪೊಲೀಸ್ ಇಲಾಖೆಯ ನೈತಿಕತೆ ಕುಸಿಯುವಂತೆ ಮಾಡಿದೆ. ಹಿರಿಯ ಅಧಿಕಾರಿಗಳು ಕಾನ್ಸ್ ಟೇಬಲ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಯಾರು ನ್ಯಾಯ ಸಮ್ಮತವಾಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಶಿಕ್ಷೆ ಕೊಡಲಾಗುತ್ತಿದೆ. ಪೊಲಿಸರು ಕಾನೂನಿಗೆ ನಿಷ್ಠೆ ಇರಬೇಕು. ಕಾಂಗ್ರೆಸ್ ನವರಿಗೆ ತಮಗೆ ನಿಷ್ಠೆ ಇರುವ ಪೊಲಿಸ್ ಅಧಿಕಾರಿಗಳು ಬೇಕಾಗಿದ್ದಾರೆ.
ಹೀಗಾಗಿ ಪೊಲಿಸ್ ಇಲಾಖೆಯನ್ನು ಪಕ್ಷಗಳ ಆಧಾರದಲ್ಲಿ ವಿಭಜಿಸುವಂತದ್ದು, ಯುನಿಫಾರ್ಮ್ ನಲ್ಲಿರುವ ಪೊಲಿಸ್ ಅಧಿಕಾರಿಗಳಿಗೆ ಶಿಕ್ಷೆ ನೀಡುವುದರಿಂದ ಅವರ ನೈತಿಕತೆ ಕುಸಿಯುತ್ತಿದೆ. ತಕ್ಷಣವೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ದುರಾಡಳಿತ ಮಿತಿಮೀರಿದೆ:-
ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರ ದುರಾಡಳಿತ ಮಿತಿ ಮೀರುತ್ತಿದೆ. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎನ್ನುವ ಕನಿಷ್ಠ ಜ್ಞಾನ ಇವರಿಗೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.