ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಬಸ್ ನಿಲ್ದಾಣದಿಂದ ಅಬ್ಬಿಗೇರಿ ಕೆರೆಯ ಮಾರ್ಗದಿಂದ ಚಿಂಚಲಿ ಕ್ರಾಸ್ವರೆಗೆ ನಿರ್ಮಾಣವಾದ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ರಸ್ತೆಯ ಮಧ್ಯ ಭಾಗದಲ್ಲಿ ಬಿರುಕು ಬಿಟ್ಟು ಬೈಕ್ ಸವಾರರು ನಿತ್ಯ ಪರದಾಡುತ್ತಿದ್ದು, ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ ಸಂತೆಗೆ ಪತಿಯ ಜೊತೆಗೆ ಬೈಕ್ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಸಿಸಿ ರಸ್ತೆ ಬಿರುಕಿನಲ್ಲಿ ಬೈಕ್ ಗಾಲಿ ಸಿಕ್ಕಿಕೊಂಡು ಬೈಕ್ ಆಯ ತಪ್ಪಿದ ಪರಿಣಾಮದಿಂದ ರೇಣುಕಾ ಚಂದ್ರಶೇಖರ ಹಣಗಿ ಎಂಬುವವರು ಸಾವಿಗೀಡಾಗಿದ್ದರು. ಇನ್ನೂ ಅನೇ ಸವಾರರು ಇದೇ ರೀತಿ ಬಿದ್ದು ಗಾಯಗೊಂಡಿದ್ದಾರೆ. ನಿತ್ಯ ಸಾವು-ನೋವುಗಳಾಗುತ್ತಿದ್ದರೂ ಯಾವ ಅಧಿಕಾರಿಗಳೂ ಶಾಶ್ವತವಾಗಿ ಸಿಸಿ ರಸ್ತೆ ಬಿರುಕು ಮುಚ್ಚುವ ಕೆಲಸಕ್ಕೆ ಮುಂದಾಗದೇ ಇರುವುದಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.



