ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸವಣೂರ ರಸ್ತೆ ಪಕ್ಕದಲ್ಲಿ ಬಾರ್ & ರೆಸ್ಟೋರೆಂಟ್ ಪ್ರಾರಂಭಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಗುರುವಾರ ಸ್ಥಳಕ್ಕೆ ಆಗಮಿಸಿದ ಅಬಕಾರಿ ಅಧಿಕಾರಿಯ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ರಾತ್ರಿ ಬಾರ್ ಪ್ರಾರಂಭಿಸಲು ವಾಹನದಲ್ಲಿ ತಂದಿದ್ದ ಮದ್ಯದ ಬಾಟಲಿಗಳ ಬಾಕ್ಸ್ ಸೇರಿದಂತೆ ವಸ್ತುಗಳನ್ನು ಅಂಗಡಿಯಲ್ಲಿರಿಸಲು ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪಿಎಸ್ಐ ಈರಪ್ಪ ರಿತ್ತಿ ಅಂಗಡಿಗೆ ಹಾಗೂ ವಾಹನಕ್ಕೆ ಬೀಗ ಹಾಕಿಸಿ ಗಲಾಟೆಯಾಗದಂತೆ ಕ್ರಮ ಕೈಗೊಂಡಿದ್ದರು.
ಗುರುವಾರ ಮುಂಜಾನೆ ಸ್ಥಳಕ್ಕೆ ಆಗಮಿಸಿದ ಅಬಕಾರಿ ಅಧಿಕಾರಿ ಸಂತೋಷ ರಡ್ಡೇರ ಸಿಬ್ಬಂದಿಗಳಿಂದ ಅಂಗಡಿಯ ಬೀಗ ತೆಗೆಸಿ ವಾಹನದಲ್ಲಿದ್ದ ಎಲ್ಲ ಮದ್ಯದ ಬಾಕ್ಸ್ಗಳನ್ನು ಒಳಗಡೆ ಇರಿಸಿದರು. ಈ ವೇಳೆ ಮತ್ತೆ ಆಗಮಿಸಿದ ಸ್ಥಳೀಯರು ಅಧಿಕಾರಿಗಳ ಮೇಲೆ ಹರಿಹಾಯ್ದರು. ಇಲ್ಲಿ ಮದ್ಯದ ಅಂಗಡಿ ಬೇಡ ಎಂದು ವರ್ಷದಿಂದಲೂ ಸಾರ್ವಜನಿಕರು ಒಕ್ಕೊರಲಿನಿಂದ ವಿರೋಧಿಸುತ್ತ ಬಂದಿದ್ದರೂ ನೀವೇ ಮುಂದು ನಿಂತು ಅಂಗಡಿಯಲ್ಲಿ ಮಾಲು ಇರಿಸುತ್ತಿರುವದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
ಅಂಗಡಿಯಲ್ಲಿ ಮಾಲು ಇಟ್ಟು ಸೀಜ್ ಮಾಡುತ್ತಿರುವದಕ್ಕೆ ಸ್ಪಷ್ಟನೆ ಕೊಟ್ಟು ಹೋಗಿ ಎಂದು ಜೀಪ್ ಎದುರು ಪ್ರತಿಭಟನೆಗೆ ಮುಂದಾದರು. ನಾನು ಸ್ಪಷ್ಟನೆ ನೀಡುವುದಿಲ್ಲ. ನಮ್ಮ ಮೇಲಿನ ಅಧಿಕಾರಿಗಳು ಇದಕ್ಕೆ ಸ್ಪಷ್ಟನೆ ನೀಡುತ್ತಾರೆ ಎಂದು ಪ್ರತಿಭಟನೆ ಮಾಡುತ್ತಿರುವವರಿಗೆ ವಿವರಿಸಿದರು. ಅಲ್ಲದೆ ಈ ಅಂಗಡಿಯ ಸಮಸ್ಯೆ ಇತ್ಯರ್ಥವಾಗುವವರೆಗೆ ಸೀಲ್ ತೆಗೆಯಲಾಗುವದಿಲ್ಲ ಎಂದು ಭರವಸೆ ನೀಡಿ ನಡೆದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ಮಾಂತಪ್ಪ ಗದ್ದಿ, ನೀಲಪ್ಪ ಹುರಕನವರ, ಭರಮಣ್ಣ ಶರಸೂರಿ, ನಾಗೇಶ ಅಮರಾಪೂರ, ಎಲ್.ಎಚ್. ಶರಸೂರಿ, ಮಾಂತೇಶ ಗುದ್ನಾಳ, ನೀಲಪ್ಪ ಕುರಹಟ್ಟಿ, ನವೀನ ಶರಸೂರಿ, ನೀಲಮ್ಮ ಹುರಕನವರ, ಸಿದ್ದಮ್ಮ ಶರಸೂರಿ, ಪಾರಮ್ಮ ಗದ್ದಿ, ದೇವಕ್ಕ ಇಮ್ಮಡಿ ಸೇರಿದಂತೆ ಅನೇಕ ಮಹಿಳೆಯರಿದ್ದರು.