ಹಾಸನ:- ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ಜರುಗಿದೆ. 45 ವರ್ಷದ ಚಂದ್ರಮ್ಮ ಮೃತ ಮಹಿಳೆ. ಈಕೆ ಗಜೇಂದ್ರಪುರ ಗ್ರಾಮದ ನಿವಾಸಿ ಎನ್ನಲಾಗಿದೆ.
ಅಂಕಿಹಳ್ಳಿ ಗ್ರಾಮದ ಕಾಫಿತೋಟವೊಂದರಲ್ಲಿ 12 ಮಂದಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ಮಾಡಿದ್ದು, ಚಂದ್ರಮ್ಮ ಅವರು ಮೃತಪಟ್ಟಿದ್ದಾರೆ. 11 ಮಂದಿ ಕಾರ್ಮಿಕರು ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನೂ ಸ್ಥಳಕ್ಕೆ ಬಂದ ನೂರಾರು ಜನರು ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕೆಂದು ಪಟ್ಟು ಹಿಡಿದು ಮೃತದೇಹ ಮೇಲೆತ್ತಲು ಬಿಡದೆ ಹೋರಾಟ ನಡೆಸಿದರು.
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದೆ. ಅಲ್ಲದೇ ಈ ಹಿಂದೆ ಸಾಕಷ್ಟು ಮಂದಿ ಕಾಡಾನೆ ದಾಳಿಗೆ ಉಸಿರು ಚಲ್ಲಿದ್ದಾರೆ. ಹೀಗಾಗಿ ಸರಣಿ ಸಾವುಗಳಿಗೆ ಬ್ರೇಕ್ ಹಾಕಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ಎಂದು ಆಕ್ರೋಶ ಹೊರ ಹಾಕಿದರು. ರಸ್ತೆ ತಡೆ ನಡೆಸಿ ಅಸಮಧಾನ ಹೊರ ಹಾಕಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎದುರು ತಮ್ಮ ನೋವು ತೋಡಿಕೊಂಡ ಜನರು “ಹೀಗೆ ಮುಂದುವರೆದರೆ ನಾವು ಬದುಕುವುದು ಹೇಗೆ? ನಮ್ಮ ಜೀವಕ್ಕೆ ಬೆಲೆಯಿಲ್ಲ. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ಇನ್ನೂ ಹಲವರು ಬಲಿಯಾಗಬೇಕಿತ್ತು. ಆದರೆ, ಇಂದು ಬದುಕಿದ್ದೇವೆ, ನಾಳೆ ಏನೋ ಆಗುತ್ತೋ ಗೊತ್ತಿಲ್ಲ ಸಮಸ್ಯೆ ಬಗೆಹರಿಸಿ” ಎಂದು ಆಗ್ರಹಿಸಿದರು.