ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಹಾವೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,
ಪ್ರತ್ಯೇಕ ರಾಜ್ಯ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕದ ಏಕೀಕರಣಕ್ಕಾಗಿ ಬಹಳಷ್ಟು ಜನರು ಹೋರಾಟ ಮಾಡಿದ್ದಾರೆ. ಅಖಂಡ ಕರ್ನಾಟಕ ಇರಬೇಕು. ಪ್ರತ್ಯೇಕತೆಗೆ ನನ್ನ ಸಹಮತ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸದನದಲ್ಲಿ ಭಾಗವಹಿಸುವಂತೆ ಈಗಾಗಲೇ 38 ಜನರಿಗೆ ಮಾತನಾಡಿದ್ದೇನೆ. ಉಳಿದವರ ಜೊತೆಯೂ ಮಾತನಾಡುತ್ತೇನೆ. ಎಲ್ಲರೂ ಅಧಿವೇಶನದಲ್ಲಿ ಭಾಗವಹಿಸಿ ಸದನದ ಗೌರವ ಹೆಚ್ಚಿಸಬೇಕು ಎಂದು ಹೊರಟ್ಟಿ ಮನವಿ ಮಾಡಿದರು.
ಸಭಾಪತಿ ಹುದ್ದೆಯಿಂದ ಕೆಳಗಡೆ ಇಳಿಸುವ ವಿಚಾರದ ಕುರಿತು ಮಾತನಾಡಿದ ಅವರು, ನಾನು ಒಂದು ಸಲ ಪರಿಷತ್ ಸಭಾಪತಿ ಆಗಿದ್ದೇನೆ. ಎಷ್ಟು ವರ್ಷ ಆಗಿದ್ದರೂ ಮಾಜಿ ಆಗಲೇಬೇಕು. ವಿಧಾನ ಪರಿಷತ್ ಸಭಾಪತಿ ಹುದ್ದೆ ಬಗ್ಗೆ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ. ಸರ್ಕಾರ ಮತ್ತು ಶಾಸಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ತಿಳಿಸಿದರು.


