ಹೈದರಾಬಾದ್:- ಪುಷ್ಪ 2 ಪ್ರೀಮಿಯರ್ ಶೋಗೆ ಹೆಚ್ಚು ಜನಜಂಗುಳಿ ಸೇರಿದ ಹಿನ್ನೆಲೆ, ಕಾಲ್ತುಳಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಹೈದರಾಬಾದ್ನ RTC ಕ್ರಾಸ್ರೋಡ್ಸ್ನ ಸಂಧ್ಯಾ ಥಿಯೇಟರ್ನಲ್ಲಿ ಜರುಗಿದೆ.
ಮೃತ ಮಹಿಳೆಯನ್ನು ದಿಲ್ಸುಖ್ನಗರದ ರೇವತಿ ಎಂದು ಗುರುತಿಸಲಾಗಿದೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು. ರಾತ್ರಿ 10:30 ರ ಸುಮಾರಿಗೆ ಥಿಯೇಟರ್ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸಿನಿಮಾ ಸ್ಕ್ರೀನಿಂಗ್ನಲ್ಲಿ ಅಲ್ಲು ಅರ್ಜುನ್ ಹಾಜರಿದ್ದರು. ಈ ವೇಳೆ ನೂಕುನುಗ್ಗಲು ಜಾಸ್ತಿಯಾಗಿ ಕಾಲ್ತುಳಿತ ಸಂಭವಿಸಿತು.
ಪರಿಣಾಮವಾಗಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಚಿಕ್ಕ ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಅಲ್ಲು ಅರ್ಜುನ್ ಸಿನಿಮಾ ನೋಡುತ್ತಿದ್ದರು ಎಂದು ವರದಿ ತಿಳಿಸಿದೆ.


