ಬಳ್ಳಾರಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡದ ಸೂಪರ್ ಸ್ಟಾರ್, ನಟ ದರ್ಶನ್ ಅವರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ನಟ ದರ್ಶನ್ ಸೇರಿದಂತೆ 14 ಮಂದಿ ವಿರುದ್ದ ಕೊಲೆ, ಕಿಡ್ನಾಪ್ ಆರೋಪ ಉಳಿದ 3 ಜನರ ಮೇಲೆ ಸಾಕ್ಷಿ ನಾಶ ಆರೋಪವನ್ನು ಚಾರ್ಜ್ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಚಾರ್ಜ್ಶೀಟ್ನಲ್ಲಿ ಇರುವ ವಿಚಾರಗಳನ್ನು ತಿಳಿದುಕೊಳ್ಳಲು ಬಳ್ಳಾರಿ ಸೆಂಟ್ರಲ್ ಜೈಲ್ನ ಲ್ಯಾಂಡ್ ಲೈನ್ನಿಂದ ಪತ್ನಿ ವಿಜಯಲಕ್ಷ್ಮಿ ನಂಬರ್ಗೆ ದರ್ಶನ್ ಕರೆ ಮಾಡಿದ್ದಾರೆ. ಅತ್ತ ಕಡೆಯಿಂದ ವಿಜಯಲಕ್ಷ್ಮಿ ಫೋನ್ ರಿಸೀವ್ ಮಾಡುತ್ತಿದ್ದಂತೆಯೇ ದರ್ಶನ್ ಭಾವುಕರಾಗಿದ್ದಾರೆ. 5 ನಿಮಿಷಗಳ ಕಾಲ ಅವರು ಎಮೋಷನಲ್ ಆಗಿಯೇ ಮಾತನಾಡಿದ್ದಾರೆ. ಕುಟುಂಬಸ್ಥರ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಚಾರ್ಜ್ಶೀಟ್ನಲ್ಲಿ ಇರುವ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿದ್ದಾರೆ. ಈ ಕೇಸ್ನಲ್ಲಿ ತಮಗೆ ಜಾಮೀನು ಸಿಗುತ್ತಾ ಅಥವಾ ಎಲ್ಲವಾ ಎಂಬ ಆತಂಕದಲ್ಲೇ ದರ್ಶನ್ ಅವರು ಪತ್ನಿಯೊಂದಿಗೆ ಚರ್ಚೆ ಮಾಡಿದ್ದಾರೆ. ಇನ್ನು ಇದೇ ವೇಳೆ ವಿಜಯಲಕ್ಷ್ಮಿಯವರು ದರ್ಶನ್ ಅವರ ಆರೋಗ್ಯವನ್ನು ವಿಚಾರಣೆ ಮಾಡಿದ್ದಾರೆ.



