ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಸಾದನಕೇರಿ ಹೆಬ್ಬಳ್ಳಿಕರ ಪ್ಲಾಟ್ ನಿವಾಸಿ ಆನಂದ ಕಲಘಟಗಿ ಎಂಬುವವರು ಟಿ.ವಿ.ಎಸ್. ಮೋಟರ್ ಕಂಪನಿಯ ಡೀಲರ್ ಹುಬ್ಬಳ್ಳಿಯ ಪ್ರಕಲ್ಪ ಮೋರ್ಸ್ ಇವರಿಂದ 15.2.2023ರಂದು ರೂ.80,211 ಕೊಟ್ಟು ಟಿ.ವಿ.ಎಸ್. ಸ್ಕೂಟರ್ ಖರೀದಿಸಿದ್ದರು. ವಾಹನದ ಇನ್ಸುರೆನ್ಸ್ ಹಾಗೂ ಅದರ ಬಿಡಿ ಭಾಗಗಳಿಗಾಗಿ ರೂ.23,789 ಹಣಕೊಟ್ಟು ವಾಹನ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಕೆಲ ದಿನಗಳಲ್ಲಿಯೇ ಅದರಲ್ಲಿ ಉತ್ಪಾದನಾ ದೋಷ ಉಂಟಾಗಿ ವಾಹನ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
ವಾಹನದ ದುರಸ್ತಿಗಾಗಿ ದೂರುದಾರ ರೂ.1,669 ಖರ್ಚು ಮಾಡಿದರೂ ಏನೂ ಪ್ರಯೋಜನವಾಗಿರಲಿಲ್ಲ.
ಸದರಿ ವಾಹನ ವಾರಂಟಿ ಅವಧಿಯೊಳಗೆ ಇದ್ದರೂ ಸರ್ವಿಸ್ ಸೆಂಟರ್ನವರು ದುರಸ್ತಿಗಾಗಿ ಹಣ ಪಡೆದಿರುತ್ತಾರೆ. ಇಬ್ಬರೂ ಎದುರುದಾರರ ಈ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂತೆ ಹಾಗೂ ಅನುಚಿತ ವ್ಯಾಪಾರದ ಪದ್ಧತಿ ಆಗುತ್ತದೆ ಎಂದು ಇಬ್ಬರೂ ಎದುರುದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ 16.12.2023ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿ ದೂರುದಾರ ರೂ.80,211 ಮತ್ತು ವಾಹನದ ಇನ್ಸುರೆನ್ಸ್, ವಾಹನದ ಇತರೇ ಭಾಗಗಳಿಗಾಗಿ ರೂ.23,789 ಹೀಗೆ ಒಟ್ಟು ರೂ. 1,04,000 ಹಣಕೊಟ್ಟು ಸ್ಕೂಟರ್ ಖರೀದಿಸಿದ ಕೆಲವೇ ದಿನಗಳಲ್ಲಿ ಅದರಲ್ಲಿ ಉತ್ಪಾದನಾ ದೋಷ ಕಂಡುಬಂದಿತ್ತು. ಆದರೆ ಆ ವಾಹನದ ಉತ್ಪಾದಕರಾಗಲಿ, ಡೀಲರ್ ಆಗಲಿ ಆ ದೋಷವನ್ನು ವಾರಂಟಿ ಅವದಿಯಲ್ಲಿ ಉಚಿತವಾಗಿ ದುರಸ್ತಿ ಮಾಡದೇ ಹಣ ಪಡೆದಿರುವುದು ಗ್ರಾಹಕ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಹಳೆಯ ಟಿ.ವಿ.ಎಸ್. ಸ್ಕೂಟರ್ ಹಿಂಪಡೆದು ನೂತನ ವಾಹನ ಕೊಡಲು ಆದೇಶಿಸಿದೆ. ತಪ್ಪಿದ್ದಲ್ಲಿ ಒಟ್ಟು ರೂ.1,04,000 ಹಣ, ಶೇ.8ರಂತೆ ತೀರ್ಪು ನೀಡಿದ ದಿನಾಂಕದಿಂದ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ಪೂರ್ತಿ ಹಣ ಕೊಡಲು ಆಯೋಗ ಟಿ.ವಿ.ಎಸ್. ಮೋಟರ್ ಕಂಪನಿ ಹಾಗೂ ಟಿ.ವಿ.ಎಸ್. ಪ್ರಕಲ್ಪ ಮೋರ್ಸ್ ಅವರುಗಳಿಗೆ ನಿರ್ದೇಶಿಸಿದೆ. ದೂರುದಾರರು ಅನುಭವಿಸಿದ ಮಾನಸಿಕ ತೊಂದರೆ ಹಾಗೂ ಅನಾನುಕೂಲತೆಗಾಗಿ ತಲಾ ರೂ.25,000 ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು-ವೆಚ್ಚ ನೀಡುವಂತೆ ಇಬ್ಬರೂ ಎದುರುದಾರರಿಗೆ ಆಯೋಗ ಆದೇಶಿಸಿದೆ.