ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಭಾದ್ರಪದ ಶುಕ್ಲದ ಚೌತಿಯಂದು ಎಲ್ಲರ ಮನಗೆ ಆಗಮಿಸಿದ ಗಣೇಶನನ್ನು ಭಕ್ತರು ಸಡಗರ, ಸಂಭ್ರಮಗಳಿಂದ ಬರಮಾಡಿಕೊಂಡರು. ಪಟಾಕಿಗಳನ್ನು ಸಿಡಿಸುವ ಮೂಲಕ, ಗುಲಾಲು ಉಗ್ಗಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಕೆಲವು ಕಡೆ ಡೊಳ್ಳು, ಜಾಂಜ್ ಮೇಳಗಳ ಮೂಲಕ ಗಣಪನನ್ನು ನಿಗದಿತ ಸ್ಥಳಕ್ಕೆ ಕೊಂಡೊಯ್ದು ಪ್ರತಿಷ್ಠಾಪನೆ ಮಾಡಲಾಯಿತು.
ಈ ಸಾರೆ ಬಹಳಷ್ಟು ಜನರು ಪರಿಸರ ಸ್ನೇಹಿ ಗಣಪನನ್ನು ಪೂಜಿಸಲು ಉತ್ಸುಕತೆ ತೋರಿದ್ದು ಎಲ್ಲರಲ್ಲಿ ಪರಿಸರ ಜಾಗೃತಿ ಮೂಡಿದೆ ಎಂಬುದಕ್ಕೆ ಸಾಕ್ಷಿಯಾದಂತಿತ್ತು. ಬಹುತೇಕ ಕಡೆಗಳಲ್ಲಿ ಮಣ್ಣಿನ ಗಣಪನನ್ನೇ ಪ್ರತಿಷ್ಠಾಪನೆ ಮಾಡಿದ್ದು ಕಂಡು ಬಂದಿತು.
ಕಳೆದ ಸಾರೆಗಿಮತ ಈ ಸಾರೆಯ ಗಣೇಶೋತ್ಸವ ಹೆಚ್ಚಿನ ಸಡಗರ ಸಂಭ್ರಮಗಳಿಂದ ಕಂಗೊಳಿಸುತ್ತಿತ್ತು. ಕಳೆದ ಬಾರಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದ್ದ ಹಿನ್ನೆಲೆಯಲ್ಲಿ ಜನರಲ್ಲಿ ಗಣೇಶೋತ್ಸವವನ್ನು ಆಚರಿಸಲು ಅಷ್ಟೊಂದು ಉತ್ಸುಕತೆ ಇರಲಿಲ್ಲ. ಆದರೆ ಈ ಸಾರೆ ಪ್ರಾರಂಭದಿಂದಲೇ ಚೆನ್ನಾಗಿ ಸುರಿದ ಮಳೆ ಸ್ವಲ್ಪ ಹೆಚ್ಚೇ ಎನ್ನುವಂತೆ ಸುರಿದದ್ದು, ರೈತಾಪಿ ವರ್ಗದಲ್ಲಿ ಹೆಚ್ಚಿನ ಸಂತೋಷ ಉತ್ಸಾಹವನ್ನು ತುಂಬಿತ್ತು.
ಸಾಯಂಕಾಲ ಮಹಿಳೆಯರು, ಮಕ್ಕಳು, ಯುವಕರು ಬೇರೆ ಬೇರೆ ವೈವಿಧ್ಯಮಯ ಗಣಪನನ್ನು ನೋಡಲು, ದರುಶನ ಪಡೆದು ಆಶೀರ್ವಾದ ಬೇಡಲು ಅಲಂಕೃತರಾಗಿ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.