ಗದಗ:– ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಗದಗ ಜಿಲ್ಲೆ ಮುಂಡರಗಿ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.
ಚಿತಾ ಚಂಡಮಾರುತ, ಅತಿವೃಷ್ಟಿಯಿಂದಾಗಿ ರೈತರು ಸಾಲಸೋಲ ಮಾಡಿ ಬೆಳೆದ ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ಭತ್ತ ಸೇರಿ ಇನ್ನಿತರ ಬೆಳೆಗಳು ನಾಶವಾಗಿದೆ.
ಹೀಗಾಗಿ ಮಳೆಯಿಂದಾಗಿ ಹಾಳಾದ ಬೆಳೆಗಳಿಗೆ ಶೀಘ್ರವೇ ಪರಿಹಾರ ನೀಡುವಂತೆ ರೈತರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅಲ್ಲದೇ ಸಮರ್ಪಕವಾಗಿ ಹುಲಿಗುಡ್ಡ ಏತನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಹಾಗೂ ಸೋಲಾರ್, ಪವನ ವಿದ್ಯುತ್ ಸ್ಥಾಪನೆಗೆ ಜಮೀನು ಬೇಡ. ಪ್ರತಿ ಹಳ್ಳಿಗೊಂದು ರಾಶಿ ಮಾಡಲು 3-4 ಎಕರೆ ಕಣ ನಿರ್ಮಿಸುವುದು ಸೇರಿ ಇನ್ನೂ ಹಲವು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದರು.
ಒಂದು ವೇಳೆ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂಡರಗಿ ಪಟ್ಟಣ ಬಂದ್ ಮಾಡುವ ಎಚ್ಚರಿಕೆಯನ್ನು ಕೂಡ ರೈತರು ಕೊಟ್ಟಿದ್ದಾರೆ. ಹೀಗಾಗಿ ಸರ್ಕಾರ ಶೀಘ್ರದಲ್ಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತಿಭಟನಾನಿರತ ರೈತರು ಮನವಿ ಸಲ್ಲಿಸಿದ್ದಾರೆ.