ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಇಲ್ಲಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಿಡಿಪಿ ಮತ್ತು ಕೃಷಿಯೇತರ ಸಾಲಗಳಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಅವ್ಯವಹಾರಗಳನ್ನು ಸಹಕಾರ ಸಂಘಗಳ ಕಾಯ್ದೆ ಕಲಂ 64ರಡಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಶೀಘ್ರವೇ ಆಡಳಿತಾಧಿಕಾರಿಗಳನ್ನು ನೇಮಿಸಬೇಕು ಎಂದು ಬ್ಯಾಂಕ್ ಸದಸ್ಯರು ಒತ್ತಾಯಿಸಿದರು.
ನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗಿಗೆ ಮನವಿ ಸಲ್ಲಿಸಿ, ಬಳಿಕ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲರಾದ ತಿಮ್ಮಲಾಪುರ ರವಿಶಂಕರ್ ಮಾತನಾಡಿ, ಸಂಘವು 10 ಅಂಶಗಳಲ್ಲಿ ಸಹಕಾರದ ಕಾಯ್ದೆ ಉಲ್ಲಂಘಿಸಿದೆ. ಸಹಕಾರ ಸಂಘದಿಂದ 7 ಕೋಟಿಗೂ ಅಧಿಕ ಹಣವನ್ನು ಬೇಕಾಬಿಟ್ಟಿಯಾಗಿ ನೀಡಿದ್ದು, ವಸೂಲಾತಿಯಲ್ಲಿ ಅವ್ಯವಹಾರ ಎಸಗಿದ್ದಾರೆ. ಕಾಯಕ ಯೋಜನೆಯಡಿ ರೂ.7.52 ಲಕ್ಷ, ಸ್ವಸಹಾಯ ಗುಂಪುಗಳ ಸಾಲದಲ್ಲಿ 14.14 ಲಕ್ಷ, ಸಂಘದ ಬಂಡವಾಳದಿಂದ ಬಿಡಿಪಿ ಸಾಲ 6.98 ಕೋಟಿ ರೂಪಾಯಿ ವಸೂಲು ಮಾಡಿಲ್ಲ ಎಂದು ಅಪಾದಿಸಿದರು.
2020-21ನೇ ಸಾಲಿನಲ್ಲಿ ಸಂಘವು 1,04,604 ನಿವ್ವಳ ಲಾಭ ಗಳಿಸಿತ್ತು. ಆದರೆ 2021ರಿಂದ 2025ರವರೆಗೆ ಒಟ್ಟು ರೂ.85.80 ಲಕ್ಷ ಕ್ರೋಢೀಕೃತ ನಷ್ಟ ತೋರಿಸಿದೆ. ಆದರೆ ಗೊಬ್ಬರ ಮಾರಾಟದ ಹಣ, ಇಸ್ಟಾಂಪ್, ಕಟ್ಟಡ ಬಾಡಿಗೆ ಹಣ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು. 2025, ಮಾರ್ಚ್ 31ರ ಅಢಾವೆ ಪತ್ರಿಕೆ ಪ್ರಕಾರ ಠೇವಣಿ ರೂ.9.40 ಕೋಟಿ ಇದೆ. ಆ ಪೈಕಿ 7.36 ಕೋಟಿ ಕೈಸಾಲ ವಿತರಿಸಲಾಗಿದೆ. ಉಳಿಕೆ 2.03 ಕೋಟಿ ಹಣ ಖರ್ಚು-ವೆಚ್ಚದಲ್ಲಿ ನಷ್ಟ ಮಾಡಿರುವುದು ಲೆಕ್ಕಪರಿಶೋಧನೆ ವರದಿಯಿಂದ ತಿಳಿಯುತ್ತದೆ ಎಂದರು.
ನಿಯಮ ಉಲ್ಲಂಘಿಸಿ ಪಿಗ್ಮಿ ಕಮಿಷನ್ ಕೊಡಲಾಗುತ್ತಿದೆ. ಸಂಘವು ನೀಡಿರುವ ಬಿಡಿಪಿ ಸಾಲವು ಒಟ್ಟು ರೂ. 6.98 ಕೋಟಿ ವಸೂಲಿ ಮಾಡದೇ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಕಟ್ಟಡದ ಬಾಡಿಗೆ ಹಣ ರೂ.10 ಲಕ್ಷವಿದೆ, ಗೊಬ್ಬರ ಮಾರಾಟದಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲಾ ಇದ್ದರೂ ಸಂಘವು ನಷ್ಟದಲ್ಲಿದೆ ಎಂದು ತೋರಿಸಲಾಗಿದೆ. ಸುಸ್ತಿ ಸಾಲ, ನಷ್ಟ ಮತ್ತು ಅನುತ್ಪಾದಕ ಆಸ್ತಿ ವಿಚಾರದ ಬಗ್ಗೆ ಪರಿಶೋಧಕರಾಗಲಿ, ಇಲಾಖೆ ಅಧಿಕಾರಿಗಳಾಗಲಿ ಪರಿಶೀಲಿಸಿಲ್ಲ ಎಂದು ಆರೋಪಿಸಿದರು.
ವಕೀಲರಾದ ಕೊಟ್ರೇಶ್, ಬ್ಯಾಂಕ್ ಸದಸ್ಯರಾದ ಬಾವಿಕಟ್ಟೆ ಭರಮಪ್ಪ, ಚಿಕ್ಕೇರಿ ವೆಂಕಟೇಶ್, ಪೂಜಾರ್ ನಾಗಪ್ಪ, ಜಿ. ಹನುಮಂತಪ್ಪ, ಜಿ. ವಿನಯಕುಮಾರ, ಟಿ. ಅಹಮದ್ ಹುಸೇನ್, ಜಿ. ಸುಜಾತ, ಗುಂಡಿ ಮಂಜಪ್ಪ, ಬಾರಿಕರ ರವಿ ಇತರರಿದ್ದರು.



