ವಿಜಯಸಾಕ್ಷಿ ಸುದ್ದಿ, ನರೇಗಲ್ : ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ಸಂವಿಧಾನದ, ರಾಜಕೀಯದ ಕಲ್ಪನೆ ಕೊಟ್ಟರೆ ಮುಂದೆ ಅವರು ಉತ್ತಮ ಸಂಸದೀಯ ಪಟುಗಳಾಗುತ್ತಾರೆ. ಅದಕ್ಕೆಂದೇ ಶಾಲೆಗಳಲ್ಲಿ ಶಾಲಾ ಸಂಸತ್ತನ್ನು ರಚಿಸಲಾಗುತ್ತಿದೆ. ಇಂದು ಉದ್ಘಾಟನೆಗೊಂಡ ಸಂಸತ್ತಿನ ಸದಸ್ಯರು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಕೆಲಸವನ್ನು ಮಾಡಬೇಕೆಂದು ಶ್ರೀ ಅನ್ನದಾನ ವಿಜಯ ಬಾಲಿಕೆಯರ ಪ್ರೌಢಶಾಲೆಯ ಚೇರಮನ್ ವೀರಣ್ಣ ಹಳ್ಳಿ ಹೇಳಿದರು.
ಶಾಲಾ ಭವನದಲ್ಲಿ ನಡೆದ 2024-25ರ ಶಾಲಾ ಸಂಸತ್ತನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಸಲಹೆಗಾರ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಪ್ರಜಾಪ್ರಭುತ್ವದ ಗುಣಲಕ್ಷಣಗಳನ್ನು ಅರಿಯಲು ಈ ಶಾಲಾ ಸಂಸತ್ತು ಸಹಕಾರಿಯಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿರುವ ಭಾರತದ ಹಿರಿಮೆ, ಗರಿಮೆ ದೊಡ್ಡದು. ಅದನ್ನು ತಿಳಿಯಲು ಪ್ರಯತ್ನಿಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಸದಸ್ಯ ಆರ್.ಜಿ. ಪಾಟೀಲ ಮಾತನಾಡಿ, ಈ ಶಾಲೆ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಸಾಧಿಸಿದೆ. ಇದಕ್ಕೆ ಇಲ್ಲಿನ ಎಲ್ಲ ಗುರುಗಳ ಪ್ರಾಮಾಣಿಕ ಶ್ರಮ ಕಾರಣ. ನೀವು ದೇಶದಲ್ಲಿ ನಡೆಯುತ್ತಿರುವ ಸಂಗತಿಗಳನ್ನು, ಘಟನೆಗಳನ್ನು ನೋಡುತ್ತ ಬೆಳೆಯಬೇಕೆಂದರು.
ಸಮಾರಂಭದಲ್ಲಿ ನೂರಕ್ಕೆ ನೂರು ಫಲಿತಾಂಶ ಸಾಧಿಸಿದ ಶಾಲೆಯ ಸಿಬ್ಬಂದಿಯವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಈಚೆಗೆ ನಿವೃತ್ತರಾದ ಶಿಕ್ಷಕಿ ಎಚ್.ಎಂ. ರತ್ನಮ್ಮ ದಂಪತಿಗಳನ್ನು, ಪತ್ರಕರ್ತ ಸಂಘದ ಅಧ್ಯಕ್ಷ ಆದರ್ಶ ಕುಲಕರ್ಣಿಯವರನ್ನು, ತಾಲೂಕಾ ನೋಂದಣಾಧಿಕಾರಿ ಗೋಪಾಲ ಬಿಲಕೇರಿಯವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಶಿಕ್ಷಕ ಬಿ.ಡಿ. ಯರಗೊಪ್ಪ ಪರಿಚಯಿಸಿದರು. ಶಿಕ್ಷಕ ಎಸ್.ಶಿವಮೂರ್ತಿ ಪ್ರಮಾಣ ವಚನ ಬೋಧಿಸಿದರು.
ವಿದ್ಯಾರ್ಥಿನಿಯರಾದ ಗೌರಿ ಪಾಟೀಲ, ಆಯೇಶಾ ಬಸಾಪೂರ ಮತ್ತು ಅನುಪಮಾ ಗ್ರಾಮಪುರೋಹಿತ ನಿರ್ವಹಿಸಿದರು. ವೇದಿಕೆಯ ಮೇಲೆ ಆಡಳಿತ ಮಂಡಳಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.


