ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸರ್ವ ಸಮಾಜದ ಅಭಿವೃದ್ಧಿ ಸಾಧ್ಯ. ಈ ದಿಶೆಯಲ್ಲಿ ಶಿಕ್ಷಣಕ್ಕೆ ಪೂರಕವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಶಿರಹಟ್ಟಿಯ ಸಿ.ಸಿ.ಎನ್ ಸರಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ವಿವೇಕ ಶಾಲೆ ಅಡಿಯಲ್ಲಿ 32 ಲಕ್ಷ ರೂ ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿರಹಟ್ಟಿ ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ದಾಖಲಾತಿಯನ್ನು ಹೊಂದುವ ಪ್ರೌಢಶಾಲೆ ಇದಾಗಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸುತ್ತಿದೆ. ಈ ಶಾಲೆಗೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇರುವ ಬಗ್ಗೆ ಇಲ್ಲಿಯ ನಿವಾಸಿಗಳು ಮನವಿಯನ್ನು ಸಲ್ಲಿಸಿದ್ದು, ಕಳೆದ ವರ್ಷವೂ ಎರಡು ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಇದೀಗ ಮತ್ತೆ ಎರಡು ಹೆಚ್ಚುವರಿ ಕೊಠಡಿಗಳು ನಿರ್ಮಾಣವಾಗಲಿವೆ.
ಮುಂದಿನ ದಿನಗಳಲ್ಲೂ ಸಹ ಶಾಲೆಗಳಿಗೆ ಅವಶ್ಯಕವಿರುವ ಎಲ್ಲ ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಶಾಲಾ ದತ್ತಿ ದಾನಿ ಎಚ್.ಎಂ. ದೇವಗಿರಿ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ಜಾನು ಲಮಾಣಿ, ಮಹೇಶ ಕಲ್ಲಪ್ಪನವರ, ಗುತ್ತಿಗೆದಾರ ಎಫ್.ಟಿ. ಕವಲೂರ, ಮಹೇಶ ವರವಿ, ಜಗದೀಶ ತೇಲಿ, ಇರ್ಷಾದ್ ಢಾಲಾಯತ, ಮುಖ್ಯೋಪಾಧ್ಯಾಯ ಜಿ.ಡಿ. ಈರಕ್ಕನವರ, ಪಿಡಬ್ಲುö್ಯಡಿ ಎಇಇ ಫಕ್ಕೀರೇಶ ತಿರ್ಲಾಪೂರ, ಮುಂತಾದವರು ಉಪಸ್ಥಿತರಿದ್ದರು.



