ಹಾವೇರಿ: ಹಾವೇರಿ ಜಿಲ್ಲೆಯಾದ್ಯಂತ ಈ ಬಾರಿ ದೀಪಾವಳಿ ಹಬ್ಬ ದುರ್ಘಟನೆಯಾಗಿ ಮಾರ್ಪಟ್ಟಿದೆ. ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮೂವರು ಮೃತಪಟ್ಟಿದ್ದಾರೆ.ಹಾವೇರಿ, ದೇವಿಹೊಸೂರು ಮತ್ತು ತಿಳವಳ್ಳಿ ಗ್ರಾಮಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ಘಟನೆಗಳು ನಡೆದಿವೆ.
ಹಾವೇರಿ ನಗರದ ಚಂದ್ರಶೇಖರ (70), ದೇವಿಹೊಸೂರು ಗ್ರಾಮದ ಮಹಮ್ಮದ್ ಹುಸೇನ್ (75) ಹಾಗೂ ತಿಳವಳ್ಳಿ ಗ್ರಾಮದ ಭರತ್ (24) ಮೃತಪಟ್ಟವರು. ಹಾವೇರಿಯ ಹಳೆ ಪಿಬಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಚಂದ್ರಶೇಖರನ್ನು ಹೋರಿ ಗುದ್ದಿದೆ. ದೇವಿಹೊಸೂರಿನಲ್ಲಿ ಮೆರವಣಿಗೆಯ ವೇಳೆ ಕಟ್ಟೆಯ ಮೇಲೆ ಕುಳಿತಿದ್ದ ಮಹಮ್ಮದ್ ಹುಸೇನ್ ರನ್ನು ಹೋರಿ ಗುದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ಇನ್ನೂ ತಿಳವಳ್ಳಿ ಗ್ರಾಮದಲ್ಲಿ ನಡೆದ ಹೋರಿ ಸ್ಪರ್ಧೆ ನೋಡಲು ಬಂದಿದ್ದ ಭರತ್ ನನ್ನು ಹೋರಿ ಎದೆ ಭಾಗಕ್ಕೆ ಗುದ್ದಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಒಂದೇ ದಿನದಲ್ಲಿ ಹಾವೇರಿ ಜಿಲ್ಲೆಯ ಮೂರು ಕಡೆಗಳಲ್ಲಿ ನಡೆದ ಈ ಘಟನೆಗಳಿಂದ ದೀಪಾವಳಿ ಸಂಭ್ರಮ ದುಃಖದಲ್ಲಿ ಅಂತ್ಯಗೊಂಡಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.