ವಿಜಯಸಾಕ್ಷಿ ಸುದ್ದಿ, ಗದಗ: ಬಸವಣ್ಣನವರ ಆದರ್ಶಗಳನ್ನು ಪಾಲಿಸುವ ಮೂಲಕ ಅರ್ಥಪೂರ್ಣವಾಗಿ ಬಸವ ಪಂಚಮಿ ಆಚರಿಸುತ್ತಿರುವುದು ಸಂತಸದ ಸಂಗತಿ. ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆರೆದು ಪೌಷ್ಟಿಕ ಆಹಾರವನ್ನು ವ್ಯರ್ಥ ಮಾಡುವ ಬದಲು ಅಗತ್ಯವಿರುವವರಿಗೆ ಹಂಚಬೇಕು ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ನಗರದ ಬ್ಯಾಂಕರ್ಸ್ ಕಾಲೋನಿಯ ಜೀವನ ಸಂಧ್ಯಾ ಸುಖಾಲಯ ವೃದ್ಧಾಶ್ರಮದಲ್ಲಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಸ್ಥೆ, ಶರಣ ಸಾಹಿತ್ಯ ಪರಿಷತ್, ಕದಳಿವೇದಿಕೆ, ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಹಡಪದ ಲಿಂಗಮ್ಮ ಮಹಿಳಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಬಸವ ಪಂಚಮಿ ಅಂಗವಾಗಿ ಹಮ್ಮಿಕೊಂಡಿದ್ದ ಹಾಲುಣ್ಣಿಸುವ ಕಾರ್ಯಕ್ರಮದಲ್ಲಿ ವೃದ್ಧರಿಗೆ ಹಾಲು ವಿತರಿಸಿ ಅವರು ಆಶೀರ್ವಚನ ನೀಡಿದರು.
ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆರೆದು ಲಕ್ಷಾಂತರ ಲೀಟರ್ ಹಾಲು ಮಣ್ಣುಪಾಲಾಗುತ್ತಿದೆ. ಬಸವಣ್ಣನವರು ಸುಮಾರು 900 ವರ್ಷಗಳ ಹಿಂದೆಯೇ ಈ ಅರ್ಥಹೀನ ಆಚರಣೆಯನ್ನು ಪ್ರಶ್ನಿಸಿ, “ಕಲ್ಲನಾಗರ ಕಂಡರೆ ಹಾಲನೆರೆಯವರೆಂಬರು, ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ” ಎಂದು ವಚನದ ಮೂಲಕ ಜಾಗೃತಿ ಮೂಡಿಸಿದ್ದರು. ಅವರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮೂಢನಂಬಿಕೆ ಹಾಗೂ ಅರ್ಥಹೀನ ಆಚರಣೆಗಳಿಂದ ದೂರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಅಧ್ಯಕ್ಷ ಹರೀಶ ಮುನವರ, ಟ್ರಸ್ಟಿಗಳಾದ ವೀರೇಂದ್ರ ಪದಮಸಿ, ವಿಪುಲ ಲೋಡಾಯಿ, ಹಿತೇಂದ್ರ ವೀರಾ, ವ್ಯವಸ್ಥಾಪಕಿ ಲಕ್ಷ್ಮೀ, ಬಸವ ಕೇಂದ್ರದ ಕಾರ್ಯದರ್ಶಿ ಎಸ್.ಎಂ. ಕವಳಿಕಾಯಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಬಸವದಳದ ಅಧ್ಯಕ್ಷ ವಿ.ಕೆ. ಕರಿಗೌಡ್ರ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬಸವಾಭಿಮಾನಿಗಳು ಉಪಸ್ಥಿತರಿದ್ದರು. ಎಂ.ಬಿ. ಲಿಂಗದಾಳ ಹಾಲಿನ ದಾಸೋಹ ಸೇವೆ ಸಲ್ಲಿಸಿದರು.
ಬಳಿಕ ಜಿಲ್ಲಾ ಆಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಾಲು ಹಾಗೂ ಬಿಸ್ಕೀಟ್ ವಿತರಿಸಲಾಯಿತು. ನಂತರ ಭೀಷ್ಮ ಕೆರೆ ಆವರಣದಲ್ಲಿರುವ 116 ಅಡಿ ಎತ್ತರದ ಬಸವಣ್ಣನವರ ಮೂರ್ತಿ ಎದುರು ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
“ಹಾಲು ಅತ್ಯಮೂಲ್ಯ ಪೌಷ್ಟಿಕ ಆಹಾರ. ಅದನ್ನು ವ್ಯರ್ಥ ಮಾಡದೆ ಅಗತ್ಯವಿರುವವರಿಗೆ ನೀಡುವ ಮೂಲಕ ಬಸವಣ್ಣನವರ ಕಾಯಕ-ದಾಸೋಹದ ಆಶಯವನ್ನು ಪಾಲಿಸಬೇಕು.”
— ಜ. ಡಾ. ತೋಂಟದ ಸಿದ್ಧರಾಮ ಶ್ರೀಗಳು



