ಚೆನ್ನೈ:- ನನಗೆ ಏನು ಬೇಕಾದರೆ ಮಾಡಿ, ಆದ್ರೆ ನನ್ನವರ ಬಿಟ್ಟುಬಿಡಿ ಎಂದು ಕಾಲ್ತುಳಿದ ಬಗ್ಗೆ ದಳಪತಿ ವಿಜಯ್ ಬೇಸರ ಹೊರ ಹಾಕಿದ್ದಾರೆ.
ಘಟನೆ ನಡೆದು ಮೂರು ದಿನಗಳ ಬಳಿಕ ವಿಜಯ್ ವಿಡಿಯೋ ಮೂಲಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವನದಲ್ಲಿಯೇ ಇಷ್ಟು ನೋವಿನ, ದುಃಖದ ದಿನವನ್ನು ನಾನು ಈವರೆಗೆ ನೋಡಿರಲಿಲ್ಲ. ನನ್ನ ಮೇಲಿನ ಪ್ರೀತಿಯಿಂದ ಅಷ್ಟು ಜನ ನೋಡಲು ಬಂದಿದ್ದರು, ಅವರ ಪ್ರೀತಿಗೆ ನಾನು ಎಂದಿಗೂ ಋಣಿಯಾಗಿರುತ್ತೇನೆ. ನಾನು ಮತ್ತೆ ಏಕೆ ಕರೂರಿಗೆ ಬರಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ನನಗೆ ಅವರ ಮೇಲಿರುವ ಪ್ರೀತಿ. ನಾನು ಮತ್ತೆ ಬಂದರೆ ಸಮಸ್ಯೆ ಆಗುತ್ತದೆ. ಆದರೆ ಖಂಡಿತ ಸಂತ್ರಸ್ತ ಕುಟುಂಬಗಳನ್ನು ನಾನು ಭೇಟಿ ಆಗಲಿದ್ದೇನೆ ಎಂದು ವಿಜಯ್ ಹೇಳಿದ್ದಾರೆ.
ನಾನು ಈವರೆಗೆ ಐದು ರ್ಯಾಲಿಗಳಲ್ಲಿ ಭಾಗಿ ಆಗಿದ್ದೇನೆ. ಎಲ್ಲಿಯೂ ಇಂಥಹ ಘಟನೆ ನಡೆದಿಲ್ಲ. ಜನರ ಸುರಕ್ಷತೆಗಾಗಿ ನಾವು ಪೊಲೀಸರ ಬಳಿ ಚರ್ಚೆ ಮಾಡಿದ್ದೆವು, ಸುರಕ್ಷಿತ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದೆವು, ಆದರೂ ಈ ಘಟನೆ ಆಗಬಾರದಿತ್ತು, ಈ ಘಟನೆ ಆಗಿ ಹೋಗಿದೆ. ನಾನು ಕೂಡ ಮನುಷ್ಯನೇ. ಆದರೆ ಇಂದಿನಿಂದ ನನಗೆ ಜನರ ಸುರಕ್ಷತೆಯೇ ಮೊದಲ ಆದ್ಯತೆ ಆಗಲಿದೆ’ ಎಂದಿದ್ದಾರೆ.
ಏನೇನು ನಡೆಯುತ್ತಿದೆ, ಏನು ನಡೆದಿದೆ ಎಂಬುದನ್ನು ಜನ ನೋಡಿದ್ದಾರೆ, ನೋಡುತ್ತಿದ್ದಾರೆ. ಸತ್ಯ ಹೊರಗೆ ಬರಲಿದೆ. ನನ್ನ ರಾಜಕೀಯ ಪಯಣ ಇನ್ನಷ್ಟು ಶಕ್ತಿಯುತ ಆಗಿದೆ’ ಎಂದಿರುವ ವಿಜಯ್, ತಮ್ಮ ಪಕ್ಷದ ಮುಖಂಡರನ್ನು ಬಂಧಿಸಿರುವ ಬಗ್ಗೆ ಮಾತನಾಡಿ, ‘ಸ್ಟಾಲಿನ್ ಸರ್, ನನ್ನ ಜನರಿಗೆ ಏನೂ ಮಾಡಬೇಡಿ, ನಿಮಗೆ ದ್ವೇಷ ತೀರಿಸಿಕೊಳ್ಳಬೇಕು ಎಂಬುದಾದರೆ ನನ್ನ ಮೇಲೆ ಮಾಡಿ, ನಾನು ನನ್ನ ಮನೆಯಲ್ಲಿಯೇ ಇರುತ್ತೇನೆ ಅಥವಾ ಕಚೇರಿಯಲ್ಲಿರುತ್ತೇನೆ ಎಂದು ವಿಜಯ್ ಹೇಳಿದ್ದಾರೆ.