ದಾನಿಗಳಿಗೆ ಪುಣ್ಯದ ಫಲ ಪ್ರಾಪ್ತಿ : ಶ್ರೀ ಚನ್ನವೀರ ಮಹಾಸ್ವಾಮಿಗಳು

0
Donation of Rs 7.25 lakhs for Dasoha service of Viraktamath Gurukula
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶತಮಾನಗಳಿಂದ ಮಠಮಾನ್ಯಗಳು ನಡೆಸುತ್ತಿರುವ ತ್ರಿವಿಧ ದಾಸೋಹ ಸೇವೆಗೆ ತನುಮನಧನದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪುಣ್ಯಾತ್ಮರಿಗೆ ಈ ಸೇವೆಯ ಪುಣ್ಯದ ಫಲ ಪ್ರಾಪ್ತವಾಗುತ್ತದೆ ಎಂದು ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಅವರು ಹೂವಿನಶಿಗ್ಲಿ ಗುರುಕುಲದ ಅನಾಥ, ಬಡಮಕ್ಕಳ ದಾಸೋಹ ಸೇವೆಗೆ ಹಲವು ವರ್ಷದಿಂದ ವರ್ಷಕ್ಕೆ 2 ಅವಧಿಗೆ ಲಕ್ಷಾಂತರ ರೂಗಳ ದಿನಸಿ ಪದಾರ್ಥ ನೀಡುವ ಕಲಬುರ್ಗಿ ತಾಲೂಕಿನ ಸೋನಾಳ ಗ್ರಾಮದ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಅವರಿಗೆ ಗ್ರಾಮಸ್ಥರು ಮತ್ತು ಗುರುಕುಲ ಮಕ್ಕಳಿಂದ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ನೆರವೇರಿಸಿ ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಮತ್ತು ಸರ್ಕಾರದ ಸೌಲಭ್ಯವಿಲ್ಲದ್ದರಿಂದ ಗುರುಕುಲದಲ್ಲಿನ 300ಕ್ಕೂ ಹೆಚ್ಚು ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ನೀಡುವುದು ಅತ್ಯಂತ ಕಷ್ಟದ ಕೆಲಸ.

ಆದರೆ ಗುರುಕುಲದ ತ್ರಿವಿಧ ದಾಸೋಹದ ಶ್ರೇಷ್ಠ ಪರಂಪರೆ ಮುಂದುವರೆಯಬೇಕು, ಆ ಮೂಲಕ ಅನಾಥ, ಬಡ ಮಕ್ಕಳ ಬದುಕಿಗೆ ಆಸರೆಯಾಗಬೇಕು ಎಂಬುದು ಶ್ರೀಮಠದ ಉದ್ದೇಶ. ಲಿಂ.ನಿರಂಜನ ಜಗದ್ಗುರುಗಳ ಆಶೀರ್ವಾದಿಂದ ವಿಜಯಕುಮಾರ ಅವರಂತಹ ಪರಮ ಶ್ರೇಷ್ಠ ಭಕ್ತರು, ದಾನಿಗಳಿಂದ ಈ ಮಕ್ಕಳ ಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂದರು.

ಈ ವೇಳೆ ನೆಹರು ಬಿರಾದಾರ, ಲೋಕೇಶ ಹನಮಶೆಟ್ಟಿ, ಸಂಜುಕುಮಾರ ಪಾಟೀಲ, ಶಿವಕುಮಾರ ಕೌಡಗಾಂವೆ, ಡಾ. ಪರಮೇಶ್ವರ ಬಿರಾದಾರ, ನಾಗಶೆಟ್ಟಿ ಕಾರಮುಂಗೆ, ರಾಜು ಲಾಂಡಗೆ, ರಾಜು ಬಿರಾದಾರ, ನಿಂಗಪ್ಪ ಹೆಬಸೂರ, ಅನ್ನದಾನಯ್ಯ ಹಿರೇಮಠ, ದೇವೇಂದ್ರಪ್ಪ ಸಣ್ಣ ಬಾಳಪ್ಪನವರ, ಆರ್.ಬಿ. ಬಡಿಗೇರ, ಪಿ.ಎಚ್. ಪಾಟೀಲ ಸೇರಿ ಶಿಕ್ಷಕ ವೃಂದ, ಸಿಬ್ಬಂದಿ, ಗುರುಕುಲದ ಮಕ್ಕಳು ಹಾಜರಿದ್ದರು.

ಸತ್ಕಾರ ಸ್ವೀಕರಿಸಿದ ವಿಜಯಕುಮಾರ ಬಿರಾದಾರ ಮಾತನಾಡಿ, ಮಕ್ಕಳ ಸೇವೆ ದೇವರ ಸೇವೆ ಎಂಬುದು ನನ್ನ ಹಿರಿಯರಿಂದ ಕಲಿತಿದ್ದೇನೆ. ಶ್ರೀಮಠವು ಬಡ, ಅನಾಥ ಮಕ್ಕಳಿಗಾಗಿ ಮಾಡುತ್ತಿರುವ ಸೇವೆಗೆ ತಮ್ಮದೊಂದು ಅಳಿಲು ಸೇವೆ. ಈ ಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಮತ್ತು ಸಂತೃಪ್ತಿ ತಂದಿದೆ ಎಂದರು.


Spread the love

LEAVE A REPLY

Please enter your comment!
Please enter your name here