ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಕಡಕೋಳ ಹಾಗೂ ಛಬ್ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ನರೇಗಾ ಹಾಗೂ ವಿವಿಧ ಸಮುದಾಯ ಕಾಮಗಾರಿಗಳ ಪರಿಶೀಲನೆಯನ್ನು ಶಿರಹಟ್ಟಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಬುಧವಾರ ನಡೆಸಿ, ಕಾಮಗಾರಿಗಳ ಗುಣಮಟ್ಟ ಹಾಗೂ ಕೂಲಿ ಕಾರ್ಮಿಕರ ಹಾಜರಾತಿ ವ್ಯವಸ್ಥೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸ್ಥಳದಲ್ಲಿದ್ದ ನರೇಗಾ ಕೂಲಿಕಾರ್ಮಿಕರೊಂದಿಗೆ ಚರ್ಚಿಸಿ ಕೆಲಸದ ಪ್ರಮಾಣ, ಕೂಲಿ ಪಾವತಿ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ಮಾತನಾಡಿದ ತಾಪಂ ಇಒ ಆರ್.ವಿ. ದೊಡ್ಡಮನಿ, “ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ ಸಮುದಾಯದ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿ ಕೂಲಿ ಕಾರ್ಮಿಕರು ಅಳತೆಗೆ ಅನುಗುಣವಾಗಿ ಕೆಲಸ ನಿರ್ವಹಿಸಿದರೆ 370 ರೂ.ಗಳ ಕೂಲಿ ದೊರೆಯುತ್ತದೆ. ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತದೆ” ಎಂದು ತಿಳಿಸಿದರು.
“ಎಲ್ಲ ಕೂಲಿ ಕಾರ್ಮಿಕರು ನಿಯಮಾನುಸಾರ ಕೆಲಸ ನಿರ್ವಹಿಸಿ ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕಬೇಕು. ಎರಡು ಬಾರಿ ಹಾಜರಾತಿ ಹಾಕದಿದ್ದರೆ ಕೂಲಿ ಹಣ ಪಾವತಿಯಾಗುವುದಿಲ್ಲ. ಆದ್ದರಿಂದ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು” ಎಂದು ಖಡಕ್ ಸೂಚನೆ ನೀಡಿದರು.
“ಬೇಸಿಗೆ ಹಿನ್ನೆಲೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು. ಬೆಳಗಿನ ಜಾವವೇ ಕೆಲಸಕ್ಕೆ ಆಗಮಿಸಿ ಕೆಲಸದಲ್ಲಿ ತೊಡಗಬೇಕು. ಬಂದಂತಹ ಕೂಲಿ ಹಣವನ್ನು ಕೃಷಿ ಚಟುವಟಿಕೆಗಳು ಹಾಗೂ ಮಕ್ಕಳ ಶಿಕ್ಷಣದ ಅಗತ್ಯತೆಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಪರಿಶೀಲನಾ ವೇಳೆ ಕಡಕೋಳ ಗ್ರಾಮ ಪಂಚಾಯತ್ ಪಿಡಿಓ ಶಿವಾನಂದ ಮಾಳವಾಡ, ಛಬ್ಬಿ ಗ್ರಾಮ ಪಂಚಾಯತ್ ಪಿಡಿಓ ಸುಜಾತಾ ಕಪ್ಪಲಿ, ಟಿಐಇಸಿ ವಿರೇಶ ಪಟ್ಟಣಶೆಟ್ಟಿ, ತಾಂತ್ರಿಕ ಸಹಾಯಕ ಆಂಜನೇಯ, ಲಿಂಗರಾಜ, ಬಿಎಫ್ಟಿ, ಡಿಇಓ, ಕಾಯಕ ಬಂಧುಗಳು, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ನರೇಗಾ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.



