ಬಿಗ್ ಬಾಸ್ 11ನೇ ಆವೃತ್ತಿ 74ನೇ ದಿನಕ್ಕೆ ಕಾಲಿಟ್ಟಿದ್ದು ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಮನೆಯಲ್ಲಿ ಉಳಿಯಲು ತಂತ್ರ – ಪ್ರತಿತಂತ್ರಗಳು ನಡೆಯುತ್ತಲೇ ಇವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಉಳಿದುಕೊಂಡಿದ್ದು ಈ ವಾರ ಎಲಿಮಿನೇಷನ್ ಆಗೋದು ಯಾರು ಎನ್ನುವ ಕುತೂಹಲವಿದೆ.
ಈ ನಡುವೆಯೇ ಶನಿವಾರದ ವಾರದ ಕಥೆ ಕಿಚ್ಚನ ಜೊತೆಗಿನ ಪಂಚಾಯತಿಯಲ್ಲಿ ಐಶ್ವರ್ಯಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ಶನಿವಾರದ ಎಪಿಸೋಡ್ ಆರಂಭವಾಗುತ್ತಿದ್ದಂತೆ ನೇರವಾಗಿ ಐಶ್ವರ್ಯಾ ವಿಷಯ ಎತ್ತಿದ ಸುದೀಪ್, ವಿಡಿಯೋ ಒಂದನ್ನು ಪ್ಲೇ ಮಾಡುತ್ತೀನಿ ಎಂದು ಹೇಳಿ, ಐಶ್ವರ್ಯಾ, ಮೋಕ್ಷಿತಾ ಹಾಗೂ ಶಿಶಿರ್ ಮಾತನಾಡುತ್ತಿರುವ ವಿಡಿಯೋ ಹಾಕಿದರು.
ವಿಡಿಯೋನಲ್ಲಿ ಐಶ್ವರ್ಯಾ, ಮೋಕ್ಷಿತಾ ಹಾಗೂ ಶಿಶಿರ್ ಅನ್ನು ಉದ್ದೇಶಿಸಿ ‘ಟಾರ್ಗೆಟ್ ಮಾಡಿ, ಟಾರ್ಗೆಟ್ ಮಾಡಿ ನಾಮಿನೇಷನ್ ಮಾಡಿ, ಜನಕ್ಕೂ ಅರ್ಥ ವಾಗುತ್ತಿದೆ. ಬಾಗಿಲಿನ ವರೆಗೆ ಕರೆದುಕೊಂಡು ಹೋಗುವ ಕೆಲಸ ನಾವು ಮಾಡೋಣ, ಆಚೆ ಕಳಿಸೋದನ್ನು ಜನ ಮಾಡುತ್ತಾರೆ’ ಎಂದಿದ್ದರು.
ಈ ವಿಷಯವನ್ನೇ ಇಟ್ಟುಕೊಂಡು ಐಶ್ವರ್ಯಾ ಅವರನ್ನು ಪ್ರಶ್ನೆ ಮಾಡಿದ ಸುದೀಪ್, ಇದು ಆಟ ಆಡುವ ರೀತಿ ಅಲ್ಲ. ನೀವು ಹೀಗೆ ರಾಜಕೀಯ ಮಾಡಿಯೇ ಗೆಲ್ಲಬೇಕು ಎಂದರೆ ನನಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲೂ ಪರಿಚಯ ಇದೆ. ಸದಸ್ಯತ್ವ ಕೊಡಿಸುತ್ತೇನೆ ಎಂದರು.
ಮುಂದುವರೆದು, ಮೋಕ್ಷಿಯಾ ಬಗ್ಗೆಯೂ ಮಾತನಾಡಿ, ‘ಹಿಂದೆ ನೀವೇ ಗುಂಪಾಗಿ ಆಡಿದವರ ಮೇಲೆ ಕೂಗಾಡಿದ್ದಿರಿ, ಕಿರುಚಾಡಿದ್ದಿರಿ, ಆದರೆ ಈಗ ನೀವೇ ಹೀಗೆ ಮಾಡುತ್ತಿದ್ದೀರ’ ಎಂದರು.
ಐಶ್ವರ್ಯಾ, ತಮ್ಮ ಮಾತುಗಳ ಬಗ್ಗೆ ಸ್ಪಷ್ಟನೆ ನೀಡುವ ಯತ್ನ ಮಾಡಿದರು. ಆದರೆ ಅದನ್ನು ಸುದೀಪ್ ಒಪ್ಪಲಿಲ್ಲ. ಅಲ್ಲದೆ, ಐಶ್ವರ್ಯಾ ಅವರ ಮಾತಿನ ಬಗ್ಗೆ ರಜತ್, ತ್ರಿವಿಕ್ರಮ್, ಭವ್ಯಾ ಇನ್ನಿತರರು ಅಸಮಾಧಾನ ವ್ಯಕ್ತಪಡಿಸಿದರು.