ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಡಾ. ಅಂಬೇಡ್ಕರ್ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟçದಲ್ಲಿ ಸಂವಿಧಾನಕ್ಕೆ ಧಕ್ಕೆ ಬರುವಂತಹ ಮಾತುಗಳನ್ನಾಡಿದ್ದಾರೆ. ಈ ಕಾರಣಕ್ಕಾಗಿ, ಎಲ್ಲ ದಲಿತ, ಪ್ರಗತಿಪರ ಒಕ್ಕೂಟಗಳು ಒಕ್ಕೊರಲಿನಿಂದ ಗದಗ ಬಂದ್ ಮಾಡಿದ್ದೇವೆ. ಗದಗ-ಬೆಟಗೇರಿ ಅವಳಿ ನಗರ ಬಂದ್ ಯಶಸ್ವಿಯಾಗಿದ್ದು, ನಗರದ ಎಲ್ಲ ವ್ಯಾಪಾರಸ್ಥರು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಶಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು, ಶಾ ಅವರು ಅಂಬೇಡ್ಕರ್ ಪ್ರತಿಮೆ ಎದುರಿಗೆ ಮಂಡಿಯೂರಿ ಕುಳಿತು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ದಲಿತ ಸಂರಕ್ಷಣಾ ಸಮಿತಿ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಗದಗ ಬಂದ್ನಲ್ಲಿ ಪಾಳ್ಗೊಂಡು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
೭೫ ವರ್ಷದ ಪೂರ್ವದಲ್ಲಿ ಬ್ರಿಟಿಷ್ರ ಕಾಲದಲ್ಲಿ ನರಕಯಾತನೆ ಅನುಭವಿಸಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಬಳಿಕ, ಪೂರಕ ಸಂವಿಧಾನ ರಚನೆಯಾದ ಬಳಿಕ ನಾವು ಈಗ ಸ್ವರ್ಗದಲ್ಲಿದ್ದೇವೆ ಎಂಬುದನ್ನು ಅಮಿತ್ ಶಾ ಮರೆತಿದ್ದಾರೆ. ಅವರಿಗೆ ಅದರ ಅಗತ್ಯವಿದ್ದಂತಿಲ್ಲ. ಮತ್ತೆ ನಮ್ಮನ್ನು ನರಕಕ್ಕೆ ತರಬೇಕು ಅಂತಿದ್ದಾರೆ. ಬಿಜೆಪಿ ನಾಯಕರು ಇಷ್ಟು ದಿನ ಸಾರ್ವಜನಿಕ ಸಭೆಗಳಲ್ಲಿ ಇಂತಹ ಕುಚ್ಯೋದದ ಹೇಳಿಕೆ ನೀಡುತ್ತಿದ್ದರು. ಆದರೆ ಈಗ ಸಂಸತ್ ಭವನದಲ್ಲಿಯೇ ಹೇಳುತ್ತಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಇದೊಂದು ಸಂಚಿನಂತಿದೆ. ಇದು ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ. ಇಂತಹ ಮನಸ್ಥಿತಿಯಿಂದ ದೇಶದ ಭವಿಷ್ಯಕ್ಕೆ ಒಳ್ಳೆಯದಾಗದು. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ ದೇಶದ ಜನ ಯಾರೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರಲ್ಲದೆ, ಈ ಹೋರಾಟ ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ನಡೆಯಲಿದೆ ಎಂದರು.
ಸಂಸದರೊಬ್ಬರು ಸಂವಿಧಾನ ಬದಲಾವಣೆ ಮಾಡುತ್ತೇವೆ, ಸಂವಿಧಾನವನ್ನು ಸುಟ್ಟುಹಾಕುತ್ತೇವೆ ಎನ್ನುತ್ತಿದ್ದರೂ ಬಿಜೆಪಿ ನಾಯಕರು ಅವರಿಗೆ ನಿರ್ಬಂಧ ಹಾಕಲಿಲ್ಲ. ದೇವರೇ ಅವರಿಗೆ ನಿರ್ಬಂಧ ಹಾಕಿದ್ದಾನೆ ಎಂದು ಪರೋಕ್ಷವಾಗಿ ಮಾಜಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಶಾಸಕ ಜಿ.ಎಸ್. ಪಾಟೀಲ ವಾಗ್ದಾಳಿ ನಡೆಸಿದರು.



