ವಿಜಯಸಾಕ್ಷಿ ಸುದ್ದಿ, ಗದಗ : ದೇಶ ಕಟ್ಟುವ, ಸೃಜನಶೀಲ ಸಮಾಜವನ್ನು ನಿರ್ಮಿಸುವ ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ಅರ್ಪಿಸುವ ಕೆಲಸ ಮಾಡುತ್ತಾ ಬರುವುದರ ಮೂಲಕ ಸಾವಿರರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸಿ, ಸೇವಾ ನಿವೃತ್ತರಾಗುತ್ತಿರುವ ಡಾ. ಎಸ್.ಎಫ್. ಸಿದ್ನೆಕೊಪ್ಪ ಅವರ ಕಾರ್ಯ ಪ್ರಶಂಸನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಗದಗ-ಬೇಟಗೇರಿ ಹೊರವಲಯದ ನಾಗಸಮುದ್ರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜರುಗಿದ ಡಾ. ಎಸ್.ಎಫ್. ಸಿದ್ನೆಕೊಪ್ಪರ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃಪಟಲದಲ್ಲಿ ಸದಾ ಕಾಲ ನಿಲ್ಲುತ್ತಾರೆ. ಇವತ್ತು ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದ ಸಾಧ್ಯವಾಗಿದೆ. ಆ ಹಿನ್ನೆಲೆಯಲ್ಲಿ ಶ್ರಮಿಸಿರುವ ಸಿದ್ನೇಕೊಪ್ಪ ಅವರ ಸುದೀರ್ಘ ಸೇವೆ ಜನಮಾನಸದಲ್ಲಿ ನೆಲೆ ನಿಲ್ಲುವಂತಹದು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಡಾ. ಎಸ್.ಎಫ್. ಸಿದ್ನೆಕೊಪ್ಪ ಮಾತನಾಡಿ, ದೇಶದ ನಿಜವಾದ ಭವಿಷ್ಯ ಅಡಗಿರುವುದು ವಿದ್ಯಾರ್ಥಿಗಳ ಕೈಯಲ್ಲಿ. ಅಂತಹ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಕಾರ್ಯ ಮಹತ್ವಪೂರ್ಣವಾದದ್ದು. ಅವರ ಭವಿಷ್ಯಕ್ಕಾಗಿ ಶಿಕ್ಷಕ ವೃಂದ ಮತ್ತು ಪಾಲಕರು ಶ್ರಮಿಸಲು ಮುಂದಾಗಿ ಎಂದು ಕರೆ ನೀಡಿದರು.
ಡಾ.ಆರ್.ಎಮ್. ಕುಬೇರಪ್ಪ, ಡಾ. ಐ.ಎ. ಪಿಂಜಾರ ಮಾತನಾಡಿ, ಅವರ ವೃತ್ತಿಯುದ್ದಕ್ಕೂ ತಮ್ಮ ಅನುಭವದ ಮೂಲಕ ಡಾ.ಶಾಬುದ್ದಿನ ಅವರು ಅನೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಲು ಶ್ರಮಿಸಿದ್ದಾರೆ.
ಅವರ ಅನುಭವದ ಸೇವೆಯಿಂದ ಸಾವಿರಾರು ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನಮಂತಗೌಡ ಆರ್ ಕಲ್ಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ಎಸ್.ಎಫ್. ಸಿದ್ನೆಕೊಪ್ಪ ಅವರಿಗೆ ವಿವಿಧ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು, ನಗರದ ವಿವಿಧ ಗಣ್ಯರಿಂದ ಸನ್ಮಾನ ಜರುಗಿತು. ನೂತನ ಕಾಲೇಜು ಸಮಿತಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಜಂಟಿ ನಿದೇರ್ಶಕ ಪ್ರಕಾಶ ಹೊಸಮನಿ, ಪ್ರಾಚಾರ್ಯ ಕಲೀಲ ಅಹ್ಮದ ಚಿಕ್ಕೇರೂರ, ವಿದ್ಯಾದರ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಾಬರ್ಜಿ, ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ, ಅಸೂಟಿ, ಎಸ್.ಎನ್. ಬಳ್ಳಾರಿ, ಪ್ರಾಚಾರ್ಯರಾದ ಶಿವಪ್ಪ ಕುರಿ, ಎಮ್.ಯು. ಹಿರೇಮಠ, ಡಾ.ಅಪ್ಪಣ್ಣ ಹಂಜೆ, ಡಾ.ರಮೇಶ ಕಲ್ಲನಗೌಡರ, ಆರ್.ಎಚ್. ಏಕಬೋಟೆ, ಶಂಕರ ರಜಪೂತ, ಮಲ್ಲಿಕಾರ್ಜುನ ಐಲಿ, ಹೊನ್ನಪ್ಪ ಸಾಕಿ, ಡಾ.ದಿವಾಕರ ಪರಕಾಳೆ, ಶಿವಕುಮಾರ ಬೆಟಗೇರಿ, ಅಂಬರೀಷ ಚಾಗಿ, ವಿಜಯ ಕಬಾಡಿ, ಮಹಮ್ಮದ ಶಾಲಗಾರ, ಬಸವರಾಜ ಕಡೇಮನಿ, ಅಶೋಕ ಮಂದಾಲಿ, ಕುಸುಮಾ ಬೆಳಗಟ್ಟಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದ್ದಿವರ್ಗದವರು ಇದ್ದರು.
ವಿಧಾನ ಪರಿಷತ್ ಸದಸ್ಯ ಎಸ್.ಬಿ. ಸಂಕನೂರ ಮಾತನಾಡಿ, ಶಿಕ್ಷಣದ ನಿಜವಾದ ಗುರಿ ಚಾರಿತ್ರ್ಯ ನಿರ್ಮಾಣ. ಶಿಕ್ಷಣವೆಂದರೆ ಕೇವಲ ಪಠ್ಯ ಕಲಿಕೆಯಲ್ಲ. ಜೀವನದ ಮೌಲ್ಯಗಳ ಶಿಸ್ತು-ಸಂಸ್ಕಾರವನ್ನು ತುಂಬುವ ಕೆಲಸ ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವೆನಿಸುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನದುದ್ದಕ್ಕೂ ಜ್ಞಾನದಾಸೋಹ ಮಾಡಿರುವ ಡಾ. ಸಿದ್ನೆಕೊಪ್ಪರ ಹೃದಯಸ್ಪರ್ಶಿ ಕಾರ್ಯ ಎಂದೂ ಮರೆಯಲಾಗದು ಎಂದರು.