ರೈತರು ಆರ್ಥಿಕವಾಗಿ ಸದೃಢರಾಗಿ : ಮಿಥುನ ಜಿ.ಪಾಟೀಲ್

0
Drive for sowing seed distribution
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ತಿಮ್ಮಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಕರ್ನಾಟಕ ಸರ್ಕಾರ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೊಡಮಾಡುವ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ರೋಣ ಪ.ಪಂ ಉಪಾಧ್ಯಕ್ಷ ಮಿಥುನ ಜಿ.ಪಾಟೀಲ್ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗೆ ಸರ್ಕಾರ ಕೃಷಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾಗಿ ರೈತರಿಗೆ ಬಿತ್ತನೆ ಮಾಡಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಕಡಲೆ, ಜೋಳದ ಬೀಜ, ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ವಿತರಣೆ ಮಾಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಬಿತ್ತನೆ ಮಾಡಿ ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ಅಧಿಕಾರಿಗಳೊಡನೆ ಉತ್ತಮ ಒಡನಾಟ ಹಾಗೂ ಸಂಬಂಧವನ್ನು ಬೆಳೆಸಿಕೊಂಡು ಇಲಾಖೆಯಿಂದ ಸಿಗುವ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗದಗ-ಬೆಟಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡಾದ ಮಾತನಾಡಿ, ತಿಮ್ಮಾಪೂರ ಗ್ರಾಮ ಅಟಲ್ ಭೂ ಜಲ ಯೋಜನೆಗೆ ಒಳಪಡುತ್ತದೆ. ಅದರಲ್ಲಿ ರೈತರ ಜಮೀನುಗಳಲ್ಲಿ ಬರುವ ಸಣ್ಣ ಸಣ್ಣ ಹಳ್ಳಗಳಿಗೆ ಚೆಕ್ ಡ್ಯಾಮ್ ಕಟ್ಟಿಕೊಳ್ಳಬಹುದು. ಗೋಕಟ್ಟೆ, ಕೃಷಿ ಹೊಂಡ ನಿರ್ಮಾಣ ಕಾರ್ಯ ಮಾಡಿಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ರಾಮಪ್ಪ ಹಚ್ಚಪ್ಪನವರ, ಹುಚ್ಚೀರಪ್ಪ ಜೋಗಿನ, ಯಲ್ಲಪ್ಪ ಜೋಗಿನ, ಕುಬೇರಗೌಡ ಪಾಟೀಲ್, ವಿರುಪಾಕ್ಷಪ್ಪ ಸೋಂಪೂರ, ಮಲ್ಲಿಕಾರ್ಜುನ ಇದ್ಲಿ, ಭೀಮಪ್ಪ ರಾಮಜಿ, ಮಲ್ಲಪ್ಪ ಮಳಗೊಂಡ, ಬಾಳಪ್ಪ ಗಂಗರಾತ್ರಿ ಶರಣಪ್ಪ ಜೋಗಿನ, ಹಕರಿಯಪ್ಪ ಬಾಬರಿ, ಸಂಗಪ್ಪ ಮಳ್ಳಿ, ಸೋಮಪ್ಪ ಜೋಗಿನ, ರಾಮಪ್ಪ ಗುಡ್ಲಾನೂರ, ವೆಂಕಟೇಶ ಸತ್ಯಪ್ಪನವರ ಮುಂತಾದ ರೈತರು ಪಾಲ್ಗೊಂಡಿದ್ದರು.

ಹಿಂಗಾರು ಹಂಗಾಮು ಈಗಷ್ಟೇ ಪ್ರಾರಂಭವಾಗುತ್ತಿದ್ದು, ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಿ ಸಂಪೂರ್ಣವಾಗಿ ತೇವಗೊಂಡ ನಂತರ ಬೀಜಗಳನ್ನು ಬೀಜೋಪಚಾರ ಮಾಡಿ ಬಿತ್ತುವುದರಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ವೀರಣ್ಣ ಗಡಾದ ಹೇಳಿದರು.


Spread the love

LEAVE A REPLY

Please enter your comment!
Please enter your name here