ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ದಸರಾ ಉತ್ಸವ ಕಾರ್ಯಕ್ರಮಗಳು ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕವಾಗಿ ನೆರವೇರುತ್ತಿದ್ದು, ವಿಶೇಷ ಪೂಜೆ, ಪುರಾಣ ಪ್ರವಚನಗಳು ನಡೆಯುತ್ತಿವೆ.
ಈ ನಿಟ್ಟಿನಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ದುರ್ಗಾದೌಡ ಕಾರ್ಯಕ್ರಮ ಮೂರನೇ ವರ್ಷ ದಿನದಿಂದ ದಿನಕ್ಕೆ ಜನರನ್ನು ಆಕರ್ಷಿಸುತ್ತಿದೆ.
ಶನಿವಾರ ದುರ್ಗಾದೌಡ ಕಾರ್ಯಕ್ರಮದ ಮೆರವಣಿಗೆ ಕೆಂಚಲಾಪುರ ಓಣಿಯ ಬನಶಂಕರಿ ದೇವಸ್ಥಾನದಿಂದ ಪ್ರಾರಂಭಗೊಂಡು ಬಜಾರ ಮಾರ್ಕೆಟ್ನ ಕೆಮ್ಮಮ್ಮ ದೇವಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಪ್ರತಿಯೊಬ್ಬರೂ ಕೇಸರಿ ಧ್ವಜ ಹಿಡಿದು ಸಾಗಿದರು. ಕಾರ್ಯಕ್ರಮದ ರೂವಾರಿ ಗುರುನಾಥ ದಾನಪ್ಪನವರ ಮಾತನಾಡಿ, ಹಿಂದೂ ಯುವಕ-ಯುವತಿಯರಲ್ಲಿ ನಮ್ಮ ಧರ್ಮದ ಬಗ್ಗೆ ಪೂಜ್ಯ ಭಾವ ಬರಬೇಕು. ಹಿಂದೂ ಧರ್ಮದ ಕುರಿತು ಜಾಗೃತಿ ಮೂಡಿಸುವುದು ದುರ್ಗಾದೌಡ ಕಾರ್ಯಕ್ರಮದ ಉದ್ದೇಶವಾಗಿದೆ.
ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಇವುಗಳನ್ನು ಮುಂದಿನ ಪೀಳಿಗೆಗೂ ಪರಿಚಯಸಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಈ ನವರಾತ್ರಿ ಉತ್ಸವದಲ್ಲಿ ಶಕ್ತಿ ದೇವತೆಗಳನ್ನು ಪೂಜಿಸುವುದು ಹಬ್ಬದ ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಬಸವರಾಜ ಅರಳಿ, ಗಂಗಾಧರ ಮೆಣಸಿನಕಾಯಿ, ತಿಪ್ಪಣ್ಣ ಸಂಶಿ, ದಸರಾ ಸಮಿತಿ ಅಧ್ಯಕ್ಷ ದೇವಪ್ಪ ಗಡೇದ, ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ರವಿ ಲಿಂಗಶೆಟ್ಟಿ, ಪ್ರಶಾಂತ ಪೋತದಾರ, ರಾಜೇಶ್ವರಿ ದಾನಪ್ಪನವರ, ನಾಗರತ್ನ ನಾಗಲೋಟಿ ಸೇರಿದಂತೆ ಅನೇಕರಿದ್ದರು.