ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿರುವ ಯುವಜನತೆಗೆ ಕೌಶಲ್ಯಾಭಿವೃದ್ಧಿ ಸಂಬಂಧಿತ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವುದೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಒಟ್ಟು 120 ಸರ್ಕಾರಿ ಐಟಿಐ ಕಾಲೇಜಿನಲ್ಲಿರುವ ಉಪಕರಣಗಳು ಸೇರಿದಂತೆ ಕಟ್ಟಡಗಳನ್ನು ನಿರ್ಮಿಸಿ ಮೇಲ್ದರ್ಜೆಗೇರಿಸಲಾಸಲಾಗುವುದು. 1400 ಕೋಟಿ ರೂ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಕೆಜಿಡಿಟಿಐ ಅಭಿವೃದ್ಧಿಗಾಗಿ 1500 ಕೋಟಿ ರೂ ಪ್ರಸ್ತಾವನೆ ಕಳುಹಿಸಲಾಗಿದೆ. ವಿಶೇಷವಾಗಿ, ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನೀಡುವ ಯುವನಿಧಿ ಗ್ಯಾರಂಟಿಯಲ್ಲಿ 2,87,000 ಪದವಿ/ಡಿಪ್ಲೋಮಾ ಮಾಡಿದವರು ನೊಂದಣಿಯಾಗಿದ್ದಾರೆ. 1,90,000 ಜನರಿಗೆ ಯುವನಿಧಿ ಗ್ಯಾರಂಟಿ ಯೋಜನೆಯಡಿ ತಿಂಗಳಿಗೆ 3 ಸಾವಿರ ರೂಗಳಂತೆ ನೀಡಲಾಗುತ್ತಿದೆ. ಅಲ್ಲದೆ, ನೋಂದಣಿಯಾದವರಿಗೆ ಹೆಚ್ಚುವರಿ ಉದ್ಯೋಗ ಕೌಶಲ್ಯವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೌಶಲ್ಯ ಅಭಿವೃದ್ಧಿ ಇಲಾಖೆಯಡಿ ಬರುವ ಐಟಿಐ ಕಾಲೇಜುಗಳು ಕೆಜಿಡಿಟಿಐ, ಸರ್ಕಾರಿ ಟೂರ್ ಆ್ಯಂಡ್ ಟ್ರೇಡಿಂಗ್ ಸೆಂಟರ್ಗಳು 33 ಇವೆ. ಈ ವರ್ಷ ಇನ್ನೂ 8 ಸೆಂಟರ್ಗಳನ್ನು ಸೇರಿಸಿ ಮೇಲ್ದರ್ಜೆಗೆ ಏರಿಸಲಾಸಲಾಗುತ್ತಿದೆ. ಅದರ ಜೊತೆಗೆ ಹೆಚ್ಚುವರಿ ಕೋರ್ಸ್ ಗಳನ್ನು ನೀಡಲಾಗುತ್ತದೆ. ಯುವಕರಿಗೆ ಯಾವ ರೀತಿ ಉದ್ಯೋಗ ಕೊಡಿಸಬಹುದು ಎನ್ನುವುದರ ಕಡೆಗೆ ಸರ್ಕಾರ ಗಮನವಹಿಸಿದೆ. ಹಾಗಾಗಿ ಬೆಳಗಾವಿ, ಕಲಬುರಗಿ, ಗದಗ, ಸೇಡಂ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅನೇಕ ಉದ್ಯೋಗ ಮೇಳಗಳನ್ನು ನಡೆಸಲಾಗಿದೆ ಎಂದರು.
ಯಾವುದೇ ಕಂಪನಿಗಳು ಮುಂದೆ ಬಂದು ತಮಗೆ ಬೇಕಾದ ಅಭ್ಯರ್ಥಿಗಳ ಸಂಖ್ಯೆ ಮತ್ತು ಅವರಿಗೆ ಇರಬೇಕಾದ ಕೌಶಲ್ಯವನ್ನು ತಿಳಿಸಿದರೆ, ಉದ್ಯೋಗವನ್ನು ಅರಿಸಿ ಬರುವವರಿಗೆ ತಗಲುವ ತರಬೇತಿ ವೆಚ್ಚವನ್ನು ಸರ್ಕಾರವೇ ನೀಡುತ್ತದೆಯಲ್ಲದೆ, ಇಂಡಸ್ಟ್ರಿಯಲ್ ಲಿಂಕೇಜ್ ಮಾಡಲಾಗುತ್ತದೆ.
– ಡಾ. ಶರಣಪ್ರಕಾಶ್ ಪಾಟೀಲ್.
ವೈದ್ಯಕೀಯ, ಕೌಶಲ್ಯ ಅಭಿವೃದ್ಧಿ ಸಚಿವರು.