ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಆದ್ರಳ್ಳಿಯಲ್ಲಿ ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯ ಮಟ್ಟದ ಭಾರಿ ಜಂಗಿ ನಿಕಾಲಿ ಕುಸ್ತಿಗಳು ಜರುಗಿದವು. ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಕಸ್ತಿಪಟುಗಳು ಸೇರಿ 20 ಜೋಡಿ ವಿಶೇಷ ಕುಸ್ತಿ ಪೈಲ್ವಾನರ ಸೆಣಸಾಟ ನೆರೆದಿದ್ದ ಅಪಾರ ಜನಸ್ತೋಮದ ಮೈನವಿರೇಳಿಸಿತು. ಮುಸ್ಸಂಜೆಯ ಮಬ್ಬಿನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸೆಣಸಿದ ಕಲಿಗಳ ವಿವಿಧ ಭಂಗಿ, ಪಟ್ಟು, ಕರಾಮತ್ತುಗಳು ನೋಡುಗರ ಮೈನವಿರೇಳಿಸುವಂತೆ ಮಾಡಿದವು.
ಶ್ರೀಮಠದ ಕುಮಾರ ಮಹಾರಾಜರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕುಸ್ತಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಜಾನಪದ ಶೈಲಿಯ ಗ್ರಾಮೀಣ ಕ್ರೀಡೆಯಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ಯುವ ಜನತೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯಪೂರ್ಣ ಜೀವನ ಮತ್ತು ಉತ್ತಮ ಸಮಾಜಕ್ಕೆ ಕಾರಣರಾಗಬೇಕು. ಜಾತ್ರೆ, ಹಬ್ಬ, ಉತ್ಸವ ಸಂದರ್ಭದಲ್ಲಿ ನಡೆಸುವ ಇಂತಹ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಕುಸ್ತಿ ಪಂದ್ಯ ವೀಕ್ಷಿಸಿ ಪ್ರಸಂಶಿಸಿದರು. ಹಿರಿಯ ಆಟಗಾರ ಹುಸೇನಸಾಬ್ ಅಗಸಿಬಾಗಿಲು, ಗುರಪ್ಪ ವಡ್ಡರ, ಸುರೇಶ ಲಮಾಣಿ, ಅಲ್ಲಾಭಕ್ಷಿ ವಾಲಿಕಾರ, ರಾಜೇಸಾಬ್ ಸನ್ನದಿ, ಪರಶುರಾಮ ನಾಯಕ, ಚಂದ್ರು ಲಮಾಣಿ, ಗೋಪಾಲ ಲಮಾಣಿ, ಷಣ್ಮುಖ ವಡ್ಡರ, ರಿಯಾಜ್ ಗದಗ, ಕೃಷ್ಣಾ ವಿ.ಕೆ ಸೇರಿ ಅನೇಕರಿದ್ದರು. ದೇವೇಂದ್ರಪ್ಪ ಗಡೇದ, ಗಿರೀಶ ಲಮಾಣಿ, ಪುಟ್ಟಪ್ಪ ಶಿಗ್ಲಿ ನಿರ್ವಹಿಸಿದರು.
ವಿವಿಧ ಜಿಲ್ಲೆಗಳಿಂದ ಪ್ರಸಿದ್ಧ ಕುಸ್ತಿಪಟುಗಳು ಆಗಮಿಸಿದ್ದರು. ಕರ್ನಾಟಕ ಕೇಸರಿ ಸಿದ್ದಪ್ಪ ಗುಲಬರ್ಗ-ಗಜಾನನ ಹನಗುಡಿ, ನಿಶ್ಚಿತ ಮಂಡ್ಯ-ಶಂಕರ ಕಲಾಲ್, ಮಲ್ಲಿಕಾರ್ಜುನ ಯಲವಟ್ಟಿ-ಅಮೃತ್ ತಡಸಿನಕೊಪ್ಪ, ಧ್ರುವ ಉಣಕಲ್-ಅಭಿಷೇಕ ತಡಸಿನಕೊಪ್ಪ, ಸೋನು ಕರಡಿಕೊಪ್ಪ-ನಂದೀಶ ಉಣಕಲ್, ಮಹಾಂತೇಶ ಕರಡಿಕೊಪ್ಪ-ಪ್ರಕಾಶ ಹಿರೆಹೊನ್ನಳ್ಳಿ, ಆಕಾಶ ಕರಡಿಕೊಪ್ಪ-ಉಮೇಶ ತಡಸಿನಕೊಪ್ಪ, ವಿಕ್ರಂ ಉಣಕಲ್-ಶಶಿಧರ ಗಾಮನಗಟ್ಟಿ, ಕುಶಾಲ ಕೆ-ಪ್ರದೀಪ ಗುಡಿಹಾಳ ಈ ವಿಶೇಷ ಕುಸ್ತಿಪಟುಗಳು ಪರಸ್ಪರ ಕಾದಾಡಿ ಗಮನ ಸೆಳೆದರು. ಇವರಲ್ಲಿ 4 ಕುಸ್ತಿಪಟುಗಳು ಬೆಳ್ಳಿಗಧೆ ಮತ್ತು ನಗದು ಪ್ರಶಸ್ತಿ ಪಡೆದರು.